ಬೆಂಗಳೂರು: ರಾಜ್ಯದಲ್ಲಿ ಸಿಎಂ ಹುದ್ದೆ ಕುರಿತು ಚರ್ಚೆ ಜೋರಾಗಿದೆ. ಎರಡೂವರೆ ವರ್ಷಗಳ ನಂತರ ಸಿದ್ದರಾಮಯ್ಯ ಬಳಿಕ ಡಿ.ಕೆ ಶಿವಕುಮಾರ್ ಸಿಎಂ ಗಾದಿಗೇರಲಿದ್ದಾರೆ ಎಂದು ಹಲವು ಶಾಸಕರು ಹೇಳಿಕೆ ನೀಡಿದ್ದರು. ಇದಕ್ಕೆಲ್ಲ ಕಡಿವಾಣ ಹಾಕುವ ಸಲುವಾಗಿಯೇ ಯಾರು ಕೂಡ ಅಧಿಕಾರ ಹಂಚಿಕೆ ಕುರಿತು ಹೇಳಿಕೆ ನೀಡಬಾರದು ಎಂದು ಖಡಕ್ ಸೂಚನೆ ನೀಡಿತ್ತು. ಆದರೂ ಕೂಡ ಈ ಹೇಳಿಕೆ ಪ್ರತಿಹೇಳಿಕೆ ಸಮರ ನಿಂತಿಲ್ಲ. ಇದೀಗ ಈ ಕುರಿತು ಜೆಡಿಎಸ್ ಮುಖಂಡ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ನಾಳೆ ಸಿಎಂ ಆಗುವುದಾದರೆ ಜೆಡಿಎಸ್ನ 19 ಶಾಸಕರ ಬೆಂಬಲ ಇದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ನಾಳೆ ಬೆಳಗ್ಗೆ ಸಿಎಂ ಆದರೆ ನಾವು ಬೆಂಬಲ ನೀಡುತ್ತೇವೆ ಎಂದು ಓಪನ್ ಆಫರ್ ನೀಡಿದ್ದಾರೆ.
ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ಎಷ್ಟು ಜನ ಸಿಎಂ ಆಗುತ್ತಾರೆ ಗೊತ್ತಿಲ್ಲ. ಇದನ್ನು ನೋಡಿದರೆ ಈ ಸರ್ಕಾರಕ್ಕೆ ಒಂದು ಹೆಸರು ಇಡಬಹುದು. ಟಿಸಿಎಂ, ಡಿಸಿಎಂ ಸರ್ಕಾರ ಎಂದು ಕರೆಯಬಹುದು. ಟಿಸಿಎಂ ಅಂದರೆ ಟೆಂಪ್ರರಿ ಸಿಎಂ, ಡಿಸಿಎಂ ಅಂದ್ರೆ ಡೂಪ್ಲಿಕೇಟ್ ಸಿಎಂ ಎಂದು ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ.