ಬೆಂಗಳೂರು, ಅ.20 : ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿ ಒಂಟಿ ಮಹಿಳೆಯನ್ನು ಕತ್ತರಿಯಿಂದ ಚುಚ್ಚಿ ಚಾಕುವಿನಿಂದ ಇರಿದು ಕೊಲೆ ಮಾಡಿ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಒಂಟಿ ಮಹಿಳೆ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿಯೂ ಸಹ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಯಾರಬ್ ನಗರದ 10ನೆ ಕ್ರಾಸ್ ನಿವಾಸಿ, ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಅಫ್ರಿನಾಖಾನಂ (28) ಕೊಲೆಯಾದ ಮಹಿಳೆ. ಪತಿ ಲಾಲುಖಾನ್ ಹಾಗೂ ಇಬ್ಬರು ಮಕ್ಕಳೊಂದಿಗೆ ಯಾರಬ್ ನಗರದಲ್ಲಿ ನೆಲೆಸಿದ್ದ ಅಫ್ರಿನಾಖಾನಂ ಗೃಹಿಣಿಯಾಗಿದ್ದು, ಮನೆಯಲ್ಲೇ ಟೈಲರಿಂಗ್ ವೃತ್ತಿ ಮಾಡುತ್ತಿದ್ದರು. ಅಫ್ರಿನಾಖಾನಂ ಅವರು ತಮ್ಮ ಐದು ಮತ್ತು ಮೂರು ವರ್ಷದ ಇಬ್ಬರು ಮಕ್ಕಳನ್ನು ತವರು ಮನೆಗೆ ಕಳುಹಿಸಿದ್ದರು.
ಪತ್ನಿಯ ನಡತೆ ಶಂಕಿಸಿ ಪತಿ ಲಾಲುಖಾನ್ ಆಗಾಗ್ಗೆ ಜಗಳವಾಡುತ್ತಿದ್ದರು. ನಿನ್ನೆಯೂ ಸಹ ದಂಪತಿ ನಡುವೆ ಜಗಳವಾಗಿದೆ. ಗುರಪ್ಪನಪಾಳ್ಯದ ಟಿಂಬರ್ಯಾರ್ಡ್ನಲ್ಲಿ ಕೆಲಸ ಮಾಡುತ್ತಿದ್ದ ಲಾಲುಖಾನ್ ಅವರು ಎಂದಿನಂತೆ ನಿನ್ನೆ ಬೆಳಗ್ಗೆ ಕೆಲಸಕ್ಕೆ ತೆರಳಿದ್ದಾರೆ.
ಅಫ್ರಿನಾಖಾನ್ ಮನೆಯಲ್ಲಿ ಒಬ್ಬರೇ ಇದ್ದರು. ಇದೇ ಸಮಯ ಕಾದಿದ್ದ ದುಷ್ಕರ್ಮಿ ಮನೆಗೆ ಬಂದು ಮಹಿಳೆಯೊಂದಿಗೆ ಮಾತನಾಡಿದ್ದಾನೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳವಾದಾಗ ಕೈಗೆ ಸಿಕ್ಕಿದ ಕತ್ತರಿಯಿಂದ ಮನಬಂದಂತೆ ಆಕೆಯ ದೇಹದ ವಿವಿಧ ಕಡೆ ಚುಚ್ಚಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಸಾಕ್ಷ್ಯ ನಾಶಪಡಿಸುವ ಸಲುವಾಗಿ ಬಟ್ಟೆಗೆ ಬೆಂಕಿ ಹಚ್ಚಿ ಅಫ್ರಿನಾಖಾನಂ ದೇಹದ ಮೇಲೆ ಬಿಸಾಡಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ನಿನ್ನೆ ಸಂಜೆ 4.30ರ ಸುಮಾರಿನಲ್ಲಿ ಇವರ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದವರು ಸಮೀಪದಲ್ಲೇ ಇದ್ದ ಅಫ್ರಿನಾ ಅವರ ಸಹೋದರರಿಗೆ ತಿಳಿಸಿದ್ದಾರೆ.
ಸಹೋದರರು ಇವರ ಮನೆ ಬಳಿ ಬಂದು ಲಾಲುಖಾನ್ ಅವರಿಗೆ ವಿಷಯ ತಿಳಿಸಿ ಬಾಗಿಲು ಒಡೆದು ನೋಡಿದಾಗ ಮಂಚದ ಮೇಲೆ ಅಫ್ರಿನಾಖಾನಂ ಶವ ಕಂಡುಬಂದಿದೆ. ಬೆಂಕಿಯಿಂದಾಗಿ ಹಾಸಿಗೆ ಹಾಗೂ ದೇಹದ ಮೇಲಿನ ಬಟ್ಟೆಗಳು ಸುಟ್ಟಿವೆ. ತಕ್ಷಣ ಎಲ್ಲರೂ ಸೇರಿ ಬೆಂಕಿಯನ್ನು ಆರಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದ ಬನಶಂಕರಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆರೋಪಿ ಸುಳಿವಿದೆ: ಒಂಟಿ ಮಹಿಳೆಯನ್ನು ಕೊಲೆ ಮಾಡಿ ಬೆಂಕಿ ಹಚ್ಚಿರುವ ಆರೋಪಿಯ ಸುಳಿವಿದೆ. ಆದಷ್ಟು ಬೇಗ ಬಂಸುತ್ತೇವೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಈ ಸಂಜೆಗೆ ತಿಳಿಸಿದ್ದಾರೆ.