ಬೆಂಗಳೂರು: ಜನರು ದೈನಂದಿನ ಚಟುವಟಿಕೆಗಳಿಗೆ ಸೈಕಲ್ ಬಳಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಜೂ.3 ರಂದು “ವಿಶ್ವ ಬೈಸಿಕಲ್ ದಿನಾಚರಣೆ”ಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ನಾರಾಯಣಗೌಡ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಎನ್ಎಸ್ಎಸ್ ಹಾಗೂ ನಮ್ಮ-ನಿಮ್ಮ ಸೈಕಲ್ ಫೌಂಡೇಷನ್ ಸಂಯುಕ್ತಾಶ್ರಯಲ್ಲಿ ಜೂನ್ 3 ರಂದು ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗುವ “ವಿಶ್ವ ಬೈಸಿಕಲ್ ದಿನಾಚರಣೆ” ಕುರಿತು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸ್ಮಾರ್ಟ್ ಸಿಟಿ ಬೆಂಗಳೂರನ್ನು ಮಾಲಿನ್ಯ ಮುಕ್ತ ಸಿಟಿಯನ್ನಾಗಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ ಎಂದರು.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ಸೈಕಲ್ ರ್ಯಾಲಿ ನಡೆಯಲಿದ್ದು, ಕರ್ನಾಟಕದ 7 ಐತಿಹಾಸಿಕ ಸ್ಥಳಗಳಾದ ಹಂಪಿ, ಬೇಲೂರು, ರಾಣಿ ಅಬ್ಬಕ್ಕ ಕೋಟೆ, ಗೋಲ್ ಗುಂಬಜ್, ಮೈಸೂರು ಅರಮನೆ, ಮಲ್ಪೆ ಮತ್ತು ಮಡಿಕೇರಿ ಕೋಟೆಗಳಲ್ಲಿ ಬೈಸಿಕಲ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೈಕಲ್ ಬಳಕೆ ಹೆಚ್ಚಿಸಿದಷ್ಟು ಪರಿಸರ ಮಾಲಿನ್ಯವನ್ನು ತಡೆಗಟ್ಟುವುದರ ಜೊತೆಗೆ ಟ್ರಾಫಿಕ್ ಸಮಸ್ಯೆಯನ್ನು ಕೂಡ ಕಡಿಮೆ ಮಾಡಬಹುದು. ಈ ವಿಶೇಷ ಕಾರ್ಯಕ್ರಮದ ಮೂಲಕ ಸಂಚಾರ ದಟ್ಟಣೆಯ ಬೆಂಗಳೂರು ನಗರವನ್ನು ಸೈಕ್ಲಿಂಗ್ ನಗರವನ್ನಾಗಿ ಬದಲಿಸುವ ಪ್ರಯತ್ನಕ್ಕೆ ನಾಂದಿ ಹಾಡಲಾಗುತ್ತದೆ ಎಂದರು.
ನಮ್ಮ ನಿಮ್ಮ ಸೈಕಲ್ ಫೌಂಡೇಷನ್ ರವರು ಸ್ಟಾರ್ಟ್ ಅಪ್ ಸೆಲ್ ಬೆಂಗಳೂರು ಇವರ ಸಹಯೋಗದೊಂದಿಗೆ “ಲೀಡ್ ಬೆಂಗಳೂರು ರೈಡ್-2022” ಆಯೋಜಿಸುತ್ತಿದ್ದು ಇದರಲ್ಲಿ ಜರ್ಮನಿಯ ವಿವಿಧ ಕಂಪನಿಗಳ ಸಿಇಓ ಗಳು ಭಾಗವಹಿಸುತ್ತಿದ್ದಾರೆ ಎಂದರು.