ಬೆಂಗಳೂರು: ಬಿಎಂಟಿಸಿ ಸಾರಿಗೆ ಸಂಸ್ಥೆ ಈಗ ಕೋಟ್ಯಂತರ ರೂಪಾಯಿ ಸಾಲದಲ್ಲಿ ಸಿಲುಕಿದೆ. ಮೇಲಿಂದ ಮೇಲೆ ನಷ್ಟ ಹೊಂದುತ್ತಲೇ ಇದ್ದು ಲಾಭಕ್ಕೆ ಮರಳಿ ಬಾರದಷ್ಟು ಸಾಲದ ಹೊರೆ ಹೊತ್ತುಕೊಂಡಿದೆ. ಸಾಲದ ಶೂಲದಲ್ಲಿ ಸಿಲುಕಲು ಬಿಎಂಟಿಸಿ ತನ್ನ ಬಸ್ ನಿಲ್ದಾಣವನ್ನೇ ಅಡಮಾನವಿಟ್ಟಿದೆ.
ಆರ್ಟಿಐ ಕಾರ್ಯಕರ್ತ ಸಿದ್ದರಾಮಾರಾಧ್ಯ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖೆಲೆಯಿಂದಾಗಿ ಬಿಎಂಟಿಸಿಯ ಸಾಲಹೊರೆ ಎಷ್ಟು ಎಂಬುದು ಪತ್ತೆಯಾಗಿದೆ. ಬಿಎಂಟಿಸಿ, ಇದು ಬೆಂಗಳೂರಿನ ಅದೆಷ್ಟೋ ಜನರ ಜೀವನಾಡಿ.
ಒಂದು ದಿನ ಬೆಂಗಳೂರಿನಲ್ಲಿ ಬಸ್ ನಿಂತುಕೊಂಡರೆ ಬೆಂಗಳೂರಿನ ಜನಜೀವನವೇ ಅಸ್ತವ್ಯಸ್ತ ವಾಗುತ್ತದೆ. ಆದರೆ ಇಂತಹ ನಿಗಮವೇ ದಯನೀಯ ಪರಿಸ್ಥಿತಿಗೆ ಬಂದು ನಿಂತುಕೊಂಡಿದೆ. ಲಾಭದ ಹಳಿಗೆ ಬಾರದಷ್ಟು ಬಹುದೂರ ಹೋಗಿದ್ದು, ನಷ್ಟದಿಂದ ಪಾರಾಗಲು ನೂರಾರು ಕೋಟಿ ಸಾಲ ಪಡೆದು ಬಡ್ಡಿ ಕಟ್ಟೋಕೆ ಆಗದೆ ಹೆಣಗಾಡುತ್ತಿದೆ. ಆಡಳಿತ ವೈಫಲ್ಯ ಹಾಗೂ ದುಂದುವೆಚ್ಚಕ್ಕೆ ನಿಯಂತ್ರಣ ಹಾಕಲು ಸಾಧ್ಯವಾಗದೇ ಇರುವುದರಿಂದ ನಿಗಮ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ.