ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕಿನ ಕಾತ್ರಾಳ ಕೆರೆ ಹತ್ತಿರವಿರುವ ಶ್ರೀ ಆದಿಚುಂಚನಗಿರಿ ಗೋಶಾಲೆಗೆ ಶನಿವಾರ ಪಶುಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶ್ರೀ ಆದಿಚುಂಚನಗಿರಿ ಗೋಶಾಲೆ ನಿರ್ವಹಣೆ, ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಸಚಿವರು, ಗೋಶಾಲೆ ನಿರ್ವಹಣೆಗೆ ಸರ್ಕಾರದ ವತಿಯಿಂದ ಅನುದಾನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಈ ಗೋಶಾಲೆಗೆ ಸರ್ಕಾರದಿಂದ ೨.೧೬ ಲಕ್ಷ ರೂ. ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ನಮ್ಮ ಸರ್ಕಾರ ಸಂಕಲ್ಪವಾಗಿತ್ತು. ಅದರಂತೆ ಪ್ರತಿ ಜಿಲ್ಲೆಗೆ ಒಂದು ಗೋಶಾಲೆ ತೆರೆಯಲು ಚಿಂತನೆ ನಡೆದಿದೆ ಎಂದರು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಾಣಿ ಮಂಡಳಿ, ಪಶು ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದೇವೆ. ಒಂದೇ ತಿಂಗಳಲ್ಲಿ ಹತ್ತು ಸಾವಿರ ಕರೆಗಳು ಬಂದಿವೆ.ಅಂಬ್ಯುಲೆನ್ಸ್, ವೈದ್ಯರ ನೇಮಕಗೊಳಿಸಿದ್ದು, ಪಶುಗಳ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ರಾಜ್ಯದ ಮೂವತ್ತು ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.