ಬೆಂಗಳೂರು: ಕೋವಿಡ್ ಸಂಕಷ್ಟದ ನಡುವೆಯೂ ಹಲವು ವರ್ಷಗಳ ನಂತರ ರಾಜ್ಯದಲ್ಲಿ ಇದೀಗ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿವೆ. ಕಳೆದ ಒಂದೂವರೆ ವರ್ಷದಲ್ಲಿ ಕರ್ನಾಟಕದಲ್ಲಿ 746 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2019-20ರಲ್ಲಿ ರೈತರ ಸಾವಿನ ಸಂಖ್ಯೆ 1,076 ಆಗಿತ್ತು.
ಕೃಷಿ ಇಲಾಖೆ ವರದಿ ಅನ್ವಯ ಕಳೆದ ಏಪ್ರಿಲ್ 20202ರಿಂದ ಸೆಪ್ಟೆಂಬರ್ವರೆಗೆ 746 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತಿಯಾದ ಮಳೆ, ಸಾಲಬಾಧೆ ಹಾಗೂ ಹೆಚ್ಚು ಇಳುವರಿ ಸಿಗದ ಕಾರಣ ರೈತರು ಸಾವಿನ ದಾರಿ ಹಿಡಿದಿದ್ದರು ಎನ್ನಲಾಗಿದೆ.
ಕಳೆದ ಕೆಲ ವರ್ಷದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು,ಅಂತರ್ಜಲ ಮಟ್ಟ ಏರಿಕೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಈ ಬಾರಿ ಉತ್ತಮ ಬೆಳೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿಯೇ ರೈತರು ಬೆಳೆ ಬೆಳೆಯುತ್ತಾರೆ. ಆದರೆ ಇದಕ್ಕೆ ಉತ್ತಮ ಮಳೆಯಾಗುವುದು ತುಂಬಾನೇ ಅವಶ್ಯಕ. ಮಳೆಯಾಗದಿದ್ದರೆ ಶೇ.50ರಷ್ಟು ಇಳುವರಿ ಕೂಡ ಸಿಗುವುದಿಲ್ಲ.
ಒಟ್ಟಾರೆ ಕೋವಿಡ್, ಮಳೆ ಪ್ರವಾಹದಂತಹ ಪರಿಸ್ಥಿತಿಯಲ್ಲಿಯೂ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಕೆಯಾಗಿರುವುದು ಶುಭಸುದ್ದಿಯೇ ಆಗಿದೆ.