ಬೆಂಗಳೂರು, ನ. 18: ರಾಜ್ಯಾದ್ಯಂತ ನ.22ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ,ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಇನ್ನೆರಡು ದಿನ ಸಾಧಾರಣ ಮಳೆಯಾಗಲಿದ್ದು, ನವೆಂಬರ್ 20ರಂದು ಅಧಿಕ ಮಳೆ ಸುರಿಯಲಿದೆ.
ಇನ್ನು ದಕ್ಷಿಣ ಒಳನಾಡಿನ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಕೂಡ ಮಳೆಯಾಗಲಿದೆ.
ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿ, ಟ್ರಫ್ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿ ಮತ್ತು ಒಳನಾಡಿನಲ್ಲಿ ಮಳೆ ಅಬ್ಬರಿಸಿದೆ. ಒಳನಾಡಿನ ಕೆಲ ಜಿಲ್ಲೆಗಳಿಗೆ ಸೀಮಿತವಾಗಿದ್ದ ‘ಯೆಲ್ಲೋ ಅಲರ್ಟ್’ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿದೆ. ಅದೇ ರೀತಿ ಕರಾವಳಿ ಜಿಲ್ಲೆಗಳಿಗೆ ನೀಡಲಾಗಿದ್ದ ಭಾರಿ ಮಳೆಯ ಯೆಲ್ಲೋ ಅಲರ್ಟ್ ಅನ್ನು ‘ಅತಿ ಭಾರಿ ಮಳೆಯ ಆರೆಂಜ್ ಅಲರ್ಟ್’ ಆಗಿ ಪರಿವರ್ತಿಸಲಾಗಿದೆ.
ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕೆಲ ಕಡೆ ಜಿಟಿಜಿಟಿ ಮಳೆ, ಸಾಧಾರಣ ಮಳೆಯಾದರೆ ಇನ್ನೂ ಕೆಲವೆಡೆ ಭಾರಿ ಮಳೆ ಆಗುತ್ತಿದೆ. ಮಳೆ ಚೆನ್ನಾಗಿ ಆಗುತ್ತಿರುವುದು ಮತ್ತು ಶೀತಗಾಳಿಯಿಂದ ರಾಜ್ಯದ ತಾಪಮಾನದಲ್ಲಿ ಇಳಿಕೆ ದಾಖಲಾಗಿದ್ದು ಚಳಿ ಜಾಸ್ತಿ ಆಗಿದೆ. 13 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
24 ಗಂಟೆ ಅವಧಿಯಲ್ಲಿ ಮಂಡ್ಯದ ಪಾಂಡವಪುರ ಧರ್ಮಸ್ಥಳ , ಮಂಡ್ಯದ ಶ್ರೀರಂಗಪಟ್ಟಣ , ದಕ್ಷಿಣ ಕನ್ನಡದ ಬೆಳ್ತಂಗಡಿ , ಹಾಸನದ ಹೊಳೆನರಸೀಪುರ ಮತ್ತು ಮೈಸೂರು ಸೇರಿಂದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ದಾಖಲಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಜಿಟಿಜಿಟಿ ಮಳೆ, ಶೀತಗಾಳಿ, ಚಳಿ ಮತ್ತು ಮೋಡ ಕವಿದ ವಾತಾವರಣವನ್ನೇ ಹೆಚ್ಚು ಕಂಡಿದ್ದ ನಗರದಲ್ಲಿ ಭಾನುವಾರ ಮಳೆಯ ಅಬ್ಬರ, ಮೈಕೊರೆಯುವ ಚಳಿ ಇರಲಿಲ್ಲ. ಬೆಳಗ್ಗೆ ಮೋಡವಿದ್ದರೂ ನಂತರ ಸೂರ್ಯನ ದರ್ಶನವಾಯಿತು. ಹೀಗಾಗಿ ಚಳಿಯ ವಾತಾವರಣ ಕಡಿಮೆಯಿತ್ತು.
ಮುಂಗಾರು ಹಾಗೂ ಹಿಂಗಾರು ಮಾರುತಗಳನ್ನು ಗಣನೆಗೆ ತೆಗೆದುಕೊಂಡರೆ ಈ ವೇಳೆಗೆ ಮಳೆಯ ಮಾರುತಗಳು ಅಂತ್ಯಗೊಳ್ಳಬೇಕಿತ್ತು. ನವೆಂಬರ್ ಮಧ್ಯಭಾಗದಲ್ಲೂ ಮಳೆ ಮುಂದುವರೆದಿರುವುದು ವಾಯುಭಾರ ಕುಸಿತದ ಪರಿಣಾಮ ಎಂದು ಹೇಳಲಾಗುತ್ತಿದೆ.