ಬೆಂಗಳೂರು: ಪುನೀತ್ ರಾಜ್ ಕುಮಾರ್ ಸಾವಿನ ಹಿನ್ನಲೆಯಲ್ಲಿ ಮದ್ಯ ಮಾರಾಟ ನಿಷೇಧವಾಗಿದ್ದಕ್ಕೆ ಅಶ್ಲೀಲ ಪದಗಳಿಂದ ನಿಂದಿಸಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಸ್ವತಃ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮಾಹಿತಿ ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
The accused has been arrested and further legal action is being taken. https://t.co/uIEHFryfUk
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) November 1, 2021
ಏನಿದು ಘಟನೆ?
ಅಪ್ಪು ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂಬುದು ಈ ಆದೇಶದ ಹಿಂದಿನ ಉದ್ದೇಶ ಆಗಿತ್ತು. ಕುಡಿದ ಅಮಲಿನಲ್ಲಿ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಹುದು. ಅದನ್ನು ತಪ್ಪಿಸಲು ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಈ ಆದೇಶದಿಂದ ಲಿಕ್ಕರ್ ಸಿಗದೇ ಇರುವುದಕ್ಕೆ ಕೆಲವರಿಗೆ ಕಿರಿಕಿರಿ ಆಗಿದೆ. ಅದರಲ್ಲೂ ಉತ್ತರ ಭಾರತದಿಂದ ಬಂದು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವವರು ಎಣ್ಣೆ ಸಿಗದಿದ್ದಕ್ಕೆ ಕೀಳು ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ.
ಕೆಲವರಂತೂ ನಿಷೇಧದ ನಡುವೆಯೂ ಲಿಕ್ಕರ್ ಕೊಂಡುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಅಶ್ಲೀಲ ಪದಗಳಿಂದ ಪುನೀತ್ ರಾಜ್ಕುಮಾರ್ ಅವರನ್ನು ಅವಮಾನಿಸಿದ್ದಾರೆ. ಬಿಯರ್ ಬಾಟಲಿಯ ಚಿತ್ರ ಹಂಚಿಕೊಂಡು, ‘ರಾಜ್ಕುಮಾರ್ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು ಮೂ** ಮಾಡುತ್ತೇವೆ’ ಎಂದು ಕಿಡಿಗೇಡಿಯೊಬ್ಬ ಪೋಸ್ಟ್ ಮಾಡಿದ್ದ.
ಈ ಪೋಸ್ಟ್ ವ್ಯಾಪಕ ವೈರಲ್ ಆಗಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಆತನ ಬಂಧನಕ್ಕೆ ವ್ಯಾಪಕ ಒತ್ತಾಯ ಕೂಡ ಕೇಳಿಬಂದಿತ್ತು. ಇಂಥವರಿಗೆ ಮನುಷ್ಯತ್ವ ಇಲ್ಲವೇ ನಟ ಸುದೀಪ್ ಪುತ್ರಿ ಸಾನ್ವಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೇವಲ ಆಲ್ಕೋಹಾಲ್ಗಾಗಿ ಪುನೀತ್ ಬಗ್ಗೆ ಇಂಥ ವರ್ತನೆಯೇ? ಜನರಲ್ಲಿ ಮನುಷ್ಯತ್ವ ಉಳಿದಿಲ್ಲವೇ?’ ಎಂದು ಸಾನ್ವಿ ಛೀಮಾರಿ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಆತನನ್ನು ಬಂಧಿಸಿದ್ದಾರೆ.