ರಾಜ್ಯದಲ್ಲಿ ಬಿಟ್ ಕಾಯಿನ್ ಸದ್ದು ಮಾಡುತ್ತಿದ್ದು, ಕಾಂಗ್ರೆಸ್ ಬಿಜೆಪಿ ಸರ್ಕಾರ ನಡುವೆ ಆರೋಪ ಪತ್ಯಾರೋಪ ಬರುತ್ತಿವೆ. ಸದ್ಯ ಗೃಹಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ಮೇಲೆ ಮತ್ತೊಂದು ಲಾಠಿ ಬೀಸಿದ್ದಾರೆ. 2018ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕೃಷ್ಣ ಸಿಕ್ಕಿ ಹಾಕಿಕೊಂಡಿದ್ದ. ಕಾಂಗ್ರೆಸ್ ಮಾಜಿ ಶಾಸಕನ ಮಕ್ಕಳ ಜೊತೆಗೆ ಶ್ರೀಕಿ ಭಾಗಿಯಾಗಿದ್ದ. ಶ್ರೀಕಿಯನ್ನು ಚಾರ್ಜ್ ಶೀಟ್ ನಲ್ಲಿ ಸೇರಿಸಿ ಏಕೆ ಬಂಧನ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹಸಚಿವರು, 2018ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಶಾಸಕನ ಮಕ್ಕಳ ಜೊತೆಗೆ ಶ್ರೀಕೃಷ್ಣ ಸಿಕ್ಕಿ ಹಾಕಿಕೊಂಡಿದ್ದ. ಶ್ರೀಕಿಯನ್ನು ಚಾರ್ಜ್ ಶೀಟ್ ನಲ್ಲಿ ಸೇರಿಸಿ ಏಕೆ ಬಂಧನ ಮಾಡಿಲ್ಲ. ಅವರ ಸರ್ಕಾರ ಇದ್ದಾಗ ಶ್ರೀಕೃಷ್ಣನನ್ನ ಬಂಧನ ಮಾಡಿಲ್ಲ ಏಕೆ? ನಮ್ಮ ಸರ್ಕಾರ ಬಂದಾಗ ಶ್ರೀಕೃಷ್ಣನನ್ನ ಬಂಧನ ಮಾಡಲಾಗಿತ್ತು. ಹಣ್ಣು ತಿಂದಿದ್ದು ಅವರೇ, ಮೂತಿ ಮುಸುರೆ ಅವರೇ ಮಾಡಿಕೊಂಡಿದ್ದು. ಯುಬಿ ಸಿಟಿ ಗಲಾಟೆ ವೇಳೆ ಕಾಂಗ್ರೆಸ್ ನಾಯಕರ ಮಕ್ಕಳ ಜತೆ ಇದ್ದ. ಅಂದು ಅವರ ಮಕ್ಕಳು ಏಕೆ ಇದ್ರು ಅಂತ ಜನರ ಬಳಿ ಹೇಳಲಿ. ಈಗ ಅವರ ಬಳಿ ಏನೋ ಇದೆ ಅಂತ ಹೇಳುತ್ತಿದ್ದಾರೆ. ಬುಟ್ಟಿಯಲ್ಲಿ ಹಾವಿದೆ ಬಿಡ್ತೀನಿ ಅಂತಾ ಯಾರಿಗೆ ಹೆದರಿಸುತ್ತಿದ್ದಾರೆ? ಅವರು ಹಾವು ಬಿಡಲಿ, ಎಷ್ಟು ದೊಡ್ಡದು, ಯಾರಿಗೆ ಕಚ್ಚುತ್ತದೆ, ಯಾರು ಸಾಯ್ತಾರೆ ನೋಡೋಣ ಎಂದು ಹೇಳಿದ್ದಾರೆ.
ಇನ್ನು ಬಿಟ್ ಕಾಯಿನ್ ದಂಧೆ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ, ಡಿ.ಕೆ. ಶಿವಕುಮಾರ್ ಯಾವುದಾದರೂ ಆಧಾರ ಕೊಟ್ಟರೆ ಅದನ್ನು ನಾವು ತನಿಖೆ ಮಾಡಿಸಿ ಶಿಕ್ಷೆ ಕೊಡಿಸುತ್ತೇವೆ. ನಮ್ಮ ಸರ್ಕಾರ ಎಲ್ಲಾ ವಿಷಯದಲ್ಲೂ ಪಾರದರ್ಶಕವಾಗಿದೆ. ಕಾಂಗ್ರೆಸ್ ನಾಯಕರ ಆರೋಪಗಳಿಗೆ ಉತ್ತರ ಕೊಡುತ್ತೇವೆ. ಕೇವಲ ನಮ್ಮ ಪೊಲೀಸರು ಮಾತ್ರ ಶ್ರೀಕಿ ವಿಚಾರಣೆ ನಡೆಸಿಲ್ಲ. ಕೇಂದ್ರದ ಅನುಮತಿ ಪಡೆದು ಐಐಟಿಯವರು ಹ್ಯಾಕರ್ ಶ್ರೀಕಿಯನ್ನು ವಿಚಾರಣೆ ನಡೆಸಿದ್ದಾರೆ. ಶ್ರೀಕಿ ವಿಚಾರಣೆ ನಡೆಸಿ ಕೋರ್ಟ್ಗೆ ಮಾಹಿತಿ ನೀಡಿದ್ದೇವೆ. ದುರುದ್ದೇಶಪೂರ್ವಕವಾಗಿ ಆರೋಪ ಮಾಡುವುದು ಬೇಡ. ಕಾಂಗ್ರೆಸ್ ನಾಯಕರು ನಿರ್ದಿಷ್ಟವಾಗಿ ಹೇಳಲಿ ಎಂದ ತಿರುಗೇಟು ಕೊಟ್ಟಿದ್ದಾರೆ.