ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರು ನಟನೆಯ ಜೊತೆ ಹಲವಾರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡವರು. ಅವರು ಮಾಡಿರುವ ಸಮಾಜ ಸೇವೆಗಳ ಮೂಲಕ ಅವರು ಎಲ್ಲರ ಹೃದಯದಲ್ಲಿ ನೆಲೆಸಿರುತ್ತಾರೆ. ಪುನೀತ್ ಅವರು ಸದ್ದಿಲ್ಲದೇ ಮಾಡುತ್ತಿದ್ದ ಸಮಾಜಸೇವೆಗಳಿಗೆ ಲೆಕ್ಕವೇ ಇಲ್ಲ.
ಅದರಲ್ಲಿ ಒಂದು ಅವರು 1800 ಮಕ್ಕಳನ್ನು ಓದಿಸುತ್ತಿದ್ದರು. ಅವರ ಓದಿನ ಜವಾಬ್ದಾರಿಯನ್ನು ತಾವು ತೆಗೆದುಕೊಂಡಿದ್ದರು. ಹುಟ್ಟಿದ್ದು ತಮಿಳುನಾಡಿನಲ್ಲಾದರೂ ಕನ್ನಡನಾಡಿಗಾಗಿ ಅವರು ಮಾಡಿದ ಸೇವೆ ಅಷ್ಟಿಷ್ಟಲ್ಲ, ಇದರ ಜತೆಗೇ ತಮಿಳುನಾಡಿನಲ್ಲಿಯೂ ಹಲವಾರು ಕಾರ್ಯಗಳನ್ನು ಮಾಡಿ ಅವರು ಅಲ್ಲಿಯ ಜನರ ಮನಸ್ಸನ್ನೂ ಗೆದ್ದವರು. ಇದೇ ಕಾರಣಕ್ಕೆ ಪುನೀತ್ ಅವರ ಅಗಲಿಕೆಯಿಂದ ಅನಾಥಪ್ರಜ್ಞೆಯಿಂದ ಬಳಲುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ತಾವು ಹೊತ್ತುಕೊಳ್ಳುವುದಾಗಿ ತಮಿಳು ನಟ ವಿಶಾಲ್ ಘೋಷಿಸಿದ್ದಾರೆ.
ಇನ್ಮುಂದೆ ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು ಎಂದು ಅವರು ಘೋಷಣೆ ಮಾಡಿದ್ದಾರೆ. ಮೂಲತಃ ಬೆಂಗಳೂರಿನವರಾದ, ತಮಿಳು ನಟ ವಿಶಾಲ್ ಅವರು ಅಪ್ಪು ಮೇಲಿನ ಅಭಿಮಾನದೊಂದಿಗೆ ತಾವು ತೆಗೆದುಕೊಂಡಿರುವ ನಿರ್ಣಯವನ್ನು ನಿನ್ನೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ತೆಗೆದುಕೊಂಡಿದ್ದಾರೆ.
ಇದಕ್ಕೆ ಕನ್ನಡಿಗರಂತೂ ಜಾಲತಾಣದಲ್ಲಿ ವಿಶಾಲ್ ಅವರ ವಿಶಾಲ ಹೃದಯವನ್ನು ಕೊಂಡಾಡಿದ್ದಾರೆ. ನಟ, ರಾಜಕಾರಣಿಗೂ ಇಂತಹ ಯೋಚನೆ ಬರದಿರುವಾಗ ತಮಿಳು ನಟನೊಬ್ಬ ಈ ರೀತಿ ಮಾತನಾಡಿರುವುದು ಗ್ರೇಟ್ ಎಂದು ಅಭಿನಂದನೆ ಸಲ್ಲಿಸಿದ್ದಾರೆ.