ಬೆಂಗಳೂರು : ಪ್ರಬುದ್ಧ ಯೋಜನೆಯಡಿ ಕಳೆದ ಎರಡು ವರ್ಷದಲ್ಲಿ 106 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಧನಸಹಾಯ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್ನ ಎನ್.ಎ. ಹ್ಯಾರಿಸ್ ಪ್ರಶ್ನೆಗೆ ಉತ್ತರಿಸಿದ ಅವರು, ಜಗತ್ತಿನ 20 ಪ್ರತಿಷ್ಠಿತ ವಿವಿಗಳಲ್ಲಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮೂಲವಿಜ್ಞಾನ ಮತ್ತು ಅಪ್ಲೈಡ್ ಸೈನ್ಸ್, ಕೃಷಿ ವಿಜ್ಞಾನ ಮತ್ತು ಮೆಡಿಸಿನ್, ಅಂತಾರಾಷ್ಟ್ರೀಯ ವಾಣಿಜ್ಯ, ಅರ್ಥಶಾಸ್ತ್ರ, ಅಕೌಂಟಿಂಗ್ ಫೈನಾನ್ಸ್, ಮಾನವಿಕ ಶಾಸ್ತ್ರ, ಸಾಮಾಜಿಕ ವಿಜ್ಞಾನ, ಲಲಿತ ಕಲೆ ಮತ್ತು ಕಾನೂನು ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕಳೆದ ಎರಡು ವರ್ಷದಲ್ಲಿ 106 ಮಂದಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಸರ್ಕಾರ ಧನ ಸಹಾಯ ಮಾಡಿದ್ದು, ಈ ಪೈಕಿ ಡಾ. ಬಿ.ಆರ್. ಅಂಬೇಡ್ಕರ್ ಅವರು ವ್ಯಾಸಂಗ ಮಾಡಿದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ ನಲ್ಲಿ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಹೆಮ್ಮೆ ತಂದಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯಿಂದ 2019-20ರಲ್ಲಿ 49, 2020-21ರಲ್ಲಿ 45 ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 2019-20ರಲ್ಲಿ 6 ಹಾಗೂ 2020-21ರಲ್ಲಿ 7 ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದಿದ್ದಾರೆ.