ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ಒಂದೇ ವರ್ಷದಲ್ಲಿ ಒಟ್ಟು 18 ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಒಟ್ಟು ₹11.50 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.
‘ಮೈಸೂರಿನ ರಾಜೀವ್ನಗರ ನಿವಾಸಿ ಸೈಯದ್ ಅಬೂಬಕರ್ ಸಿದ್ದಿಕ್ ಯಾನೆ ಸಿದ್ದಿಕ್ (39) ಬಂಧಿತ.
ಈತನಿಂದ 5 ದ್ವಿಚಕ್ರ ವಾಹನ, ವಿವಿಧ ಕಂಪನಿಯ 9 ಲ್ಯಾಪ್ಟಾಪ್ಗಳು, ಸೋನಿ ಕಂಪನಿಯ 1 ಕ್ಯಾಮೆರಾ, ತಲಾ 2 ಲೆನ್ಸ್ ಹಾಗೂ ಫ್ಲ್ಯಾಷ್ ಮತ್ತು ₹65 ಸಾವಿರ ನಗದು ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಬನ್ನೇರುಘಟ್ಟ ರಸ್ತೆ ಬಿಲವಾರದಹಳ್ಳಿಯ ತಾಜ್ ಮಸೀದಿ ಹತ್ತಿರ ವಾಸವಿದ್ದ ಆರೋಪಿಯ ವಿರುದ್ಧ ಈವರೆಗೂ ಒಟ್ಟು 77 ಪ್ರಕರಣಗಳು ದಾಖಲಾಗಿವೆ. ಈತ ಒಟ್ಟು 60 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ’ ಎಂದು ಹೇಳಿದ್ದಾರೆ.
‘ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಇದೇ 9ರಂದು ಠಾಣೆ ವ್ಯಾಪ್ತಿಯ ಸ್ಥಳವೊಂದರ ಬಳಿ ಸಂಜೆ 6.50ರ ಸುಮಾರಿಗೆ ಕಾರು ನಿಲುಗಡೆ ಮಾಡಿ ಕಚೇರಿಗೆ ತೆರಳಿದ್ದರು. ಅದರೊಳಗೆ ಲೆನೊವಾ ಕಂಪನಿಯ ಲ್ಯಾಪ್ಟಾಪ್, ಚಾರ್ಜರ್, ಪರ್ಸ್ ಹಾಗೂ ಕೆಲ ದಾಖಲೆಗಳನ್ನು ಇಟ್ಟಿದ್ದರು. 10 ನಿಮಿಷಗಳ ಬಳಿಕ ಬಂದು ನೋಡಿದಾಗ ಕಾರಿನ ಹಿಂಬದಿಯ ಗಾಜು ಒಡೆದಿತ್ತು. ಅದರಲ್ಲಿದ್ದ ವಸ್ತುಗಳನ್ನು ಯಾರೋ ಕಳವು ಮಾಡಿದ್ದರು. ಈ ಸಂಬಂಧ ಅವರು ಠಾಣೆಗೆ ಬಂದು ದೂರು ದಾಖಲಿಸಿದ್ದರು’ ಎಂದು ತಿಳಿಸಿದ್ದಾರೆ.
‘ಇದೇ 16ರಂದು ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಆತ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದ. ಈತನ ಬಂಧನದಿಂದ ಠಾಣೆ ವ್ಯಾಪ್ತಿಯ 3, ಜಿಗಣಿ, ಬಂಡೇಪಾಳ್ಯ, ಬಾಗಲೂರು, ಎಚ್ಎಸ್ಆರ್ ಲೇಔಟ್, ಕೆಂಗೇರಿ ಠಾಣೆ ವ್ಯಾಪ್ತಿಯ ತಲಾ 2, ಪರಪ್ಪನ ಅಗ್ರಹಾರ, ಅತ್ತಿಬೆಲೆ, ಸರ್ಜಾಪುರ, ಕೊತ್ತನೂರು, ಹುಳಿಮಾವು, ಗಿರಿನಗರ ಠಾಣೆಯ ತಲಾ ಒಂದು ಪ್ರಕರಣ ಪತ್ತೆಯಾಗಿವೆ’ ಎಂದು ಮಾಹಿತಿ ನೀಡಿದ್ದಾರೆ.
‘ಆರೋಪಿಯ ವಿರುದ್ಧ ಚಂದ್ರಾಲೇಔಟ್, ರಾಜರಾಜೇಶ್ವರಿನಗರ, ಅನ್ನಪೂರ್ಣೇಶ್ವರಿ ನಗರ, ಜ್ಞಾನಭಾರತಿ, ಬ್ಯಾಟರಾಯನಪುರ, ಬಸವೇಶ್ವರನಗರ, ವಿಜಯ ನಗರ, ಕಾಟನ್ಪೇಟೆ, ಕೋಣನಕುಂಟೆ, ಸುಬ್ರಹ್ಮಣ್ಯಪುರ, ಕುಮಾರಸ್ವಾಮಿ ಲೇಔಟ್, ಮೈಕೋ ಲೇಔಟ್, ರಾಮಮೂರ್ತಿ ನಗರ, ಕಾಡುಗೊಂಡನಳ್ಳಿ (ಕೆ.ಜಿ.ಹಳ್ಳಿ), ಸಂಜಯನಗರ, ಬಾಗಲಗುಂಟೆ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ಯಲಹಂಕ ನ್ಯೂ ಟೌನ್, ಸಂಪಿಗೆಹಳ್ಳಿ, ಅಮೃತಹಳ್ಳಿ, ಬ್ಯಾಡರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರ ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಾಗಿವೆ’ ಎಂದು
ವಿವರಿಸಿದ್ದಾರೆ.