ಬೆಂಗಳೂರು: ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಬೆಳ್ಳಂಬೆಳಗ್ಗೆ ಪ್ಯಾಂಟ್, ಟೀ ಶರ್ಟ್ ಧರಿಸಿ ಸೈಕಲ್ ಏರಿದ್ದಾರೆ.
ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ ವಿಧಾನಸೌಧದ ಮುಂಭಾಗದ ಡಾ. ಬಿ.ಆರ್.ಅಂಬೇಡ್ಕರ್ ಬೀದಿಯಲ್ಲಿ “Cheer 4 India, be like an Olympian – Cycling ride” ಘೋಷವಾಕ್ಯದಡಿ ಆಯೋಜಿಸಿದ್ದ “ಸೈಕಲ್ ರೈಡ್’ ಗೆ ಚಾಲನೆ ನೀಡಿದರು. ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿರುವ ದೇಶದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಸೈಕಲ್ ರ್ಯಾಲಿ ಇದಾಗಿದೆ.
ಈ ವೇಳೆ ಸೈಕಲ್ ಏರಿ ಜಾಥಾ ಹೋಗಿ ಬಂದರು. ಮುಖ್ಯಮಂತ್ರಿಗಳಿಗೆ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ, ಲೋಕಸಭಾ ಸದಸ್ಯರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರತಿ ವಿಷಯ, ಅಂಶಕ್ಕೂ ಸೂಕ್ಷ್ಮವಾಗಿ ಸ್ಪಂದಿಸುವ ಪ್ರಧಾನ ಮಂತ್ರಿ ಮೋದಿ ಭಾರತ ಮತ್ತು ಭಾರತೀಯತೆಗೆ ಸದಾ ತುಡಿಯುತ್ತಾರೆ, ಪ್ರತಿ ಹೆಜ್ಜೆಗೂ ಯುವ ಜನತೆಗೆ ಸ್ಪೂರ್ತಿ ತುಂಬುತ್ತಿದ್ದಾರೆ ಎಂದು ಹೇಳಿದರು.