ಬೆಂಗಳೂರು(ನ.16) : ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕನನ್ನು ಐವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಧ್ಯಪ್ರದೇಶ ಮೂಲದ ಭೂಪತ್ ಸಿಂಗ್ (25) ಹತ್ಯೆಯಾದವರು. ನ್ಯೂ ಬೈಯಪ್ಪನಹಳ್ಳಿಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಡ್ರಿಲ್ಲಿಂಗ್ ಆಪರೇಟರ್ ಆಗಿದ್ದರು.
ಭಾನುವಾರ ರಾತ್ರಿ9.30ರ ಸುಮಾರಿಗೆ ಕಾರ್ಮಿಕರ ಶೆಡ್ನಲ್ಲಿ ಊಟ ಮುಗಿಸಿ ಸ್ನೇಹಿತನೊಂದಿಗೆ ತಂಪು ಪಾನಿಯ ಕುಡಿಯಲು ಅಂಗಡಿಗೆ ಹೋಗುವಾಗ ಮಾರ್ಗ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಐವರು ದುಷ್ಕರ್ಮಿಗಳು ಜಗಳ ತೆಗೆದು ಭೂಪತ್ ಸಿಂಗ್ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದಾರೆ.
ಮದ್ಯದ ಅಮಲಿನಲ್ಲಿ ಕಿರಿಕ್:
ಭೂಪತ್ ಸಿಂಗ್ ಹಾಗೂ ಆತನ ಸ್ನೇಹಿತ ತಂಪು ಪಾನಿಯ ಕುಡಿಯಲು ಅಂಗಡಿಗೆ ನಡೆದು ಹೋಗುವಾಗ ಮಾರ್ಗ ಮಧ್ಯೆ ಪಾನಮತ್ತ ಐವರು ಯುವಕರ ಗುಂಪು ಎದುರಾಗಿದೆ. ವಿನಾಕಾರಣ ಭೂಪತ್ ಸಿಂಗ್ ಹಾಗೂ ಆತನ ಸ್ನೇಹಿತನನ್ನು ಹಿಂದಿಯಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ವೇಳೆ ಕೆಲ ಕಾಲ ಮಾತಿನ ಚಕಮಕಿ ನಡೆದಿದೆ. ಬಳಿಕ ಭೂಪತ್ ಸಿಂಗ್ ಹಾಗೂ ಆತನ ಸ್ನೇಹಿತ ಅಂಗಡಿಗೆ ಹೋಗಿದ್ದು, ಅಂಗಡಿ ಬಾಗಿಲು ಬಂದ್ ಆಗಿದೆ. ಹೀಗಾಗಿ ಇಬ್ಬರು ಬಂದ ಮಾರ್ಗದಲ್ಲೇ ಕಾರ್ಮಿಕರ ಶೆಡ್ ಕಡೆಗೆ ನಡೆದು ಬಂದಿದ್ದಾರೆ. ಆಗಲೂ ಅಲ್ಲೇ ಇದ್ದ ಐವರು ದುಷ್ಕರ್ಮಿಗಳು ಮತ್ತೆ ಭೂಪತ್ ಸಿಂಗ್ ಹಾಗೂ ಆತನ ಸ್ನೇಹಿತ ಜತೆಗೆ ಕಿರಿಕ್ ತೆಗೆದಿದ್ದಾರೆ.
ಈ ವೇಳೆ ಓರ್ವ ದುಷ್ಕರ್ಮಿ ಚಾಕು ತೆಗೆದು ಏಕಾಏಕಿ ಭೂಪತ್ ಸಿಂಗ್ ಕುತ್ತಿಗೆ ಹಾಗೂ ಎದೆಗೆ ಇರಿದಿದ್ದಾನೆ. ಈ ವೇಳೆ ಭೂಪತ್ ಸಿಂಗ್ ಕುಸಿದು ಬಿದ್ದಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳು ಭೂಪತ್ ಸಿಂಗ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಭೂಪತ್ ಸಿಂಗ್ ಮೃತಪಟ್ಟಿದ್ದಾನೆ. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.