ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮೊತ್ತದಲ್ಲಿ 8,633 ಕೋಟಿ ರೂ. ಮಂಜೂರು ಮಾಡಿದೆ. ಕರ್ನಾಟಕವೂ ಸೇರಿದಂತೆ 21 ರಾಜ್ಯಗಳಿಗೆ ನೀಡಬೇಕಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) 86,912 ಕೋಟಿ ರೂ.ಗಳನ್ನು ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ ಪಾಲು 8633 ಕೋಟಿ ರೂ. ಸೇರಿದೆ.
ಕೇಂದ್ರ ಸರ್ಕಾರವು ರಾಜ್ಯಕ್ಕೆ 2022ರ ಮೇ 31ರ ವರೆಗಿನ 8633 ಕೋಟಿ ರೂ. ಜಿಎಸ್ಟಿ ಪರಿಹಾರ ಮಂಜೂರು ಮಾಡಿದ್ದು, ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರವು ರಾಜ್ಯಗಳಿಗೆ ನೀಡಬೇಕಾದ 86,912 ಕೋಟಿ ರೂ. ಜಿಎಸ್ಟಿ ಪರಿಹಾರ ನೀಡಿದ್ದು, ಸುಭಿಕ್ಷ ಆರ್ಥಿಕತೆಯತ್ತ ಇದೊಂದು ಮಹತ್ವದ ಹೆಜ್ಜೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. ರಾಜ್ಯಗಳು ತಮ್ಮ ಸಂಪನ್ಮೂಲಗಳನ್ನು ನಿರ್ವಹಿಸುವುದಕ್ಕೆ ನೆರವಾಗಲು ಮತ್ತು ತಮ್ಮ ಕಾರ್ಯಕ್ರಮಗಳನ್ನು ವಿಶೇಷವಾಗಿ ಬಂಡವಾಳದ ಮೇಲಿನ ವೆಚ್ಚವನ್ನು ಈ ಹಣಕಾಸು ವರ್ಷದಲ್ಲಿ ಯಶಸ್ವಿಯಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯಗಳ ಸಂರಕ್ಷಿತ ಆದಾಯವು ಶೇ.14ರಷ್ಟು ಸಂಯೋಜಿತ ಬೆಳವಣಿಗೆಯಲ್ಲಿ ಬೆಳೆಯುತ್ತಿದೆ. ಆದರೆ ಸೆಸ್ ಸಂಗ್ರಹವು ಅದೇ ಅನುಪಾತದಲ್ಲಿ ಹೆಚ್ಚಾಗದ ಕಾರಣ, ಕೋವಿಡ್-19 ರಕ್ಷಿತ ಆದಾಯ ಮತ್ತು ಸೆಸ್ ಸಂಗ್ರಹದಲ್ಲಿನ ಕಡಿತ ಸೇರಿದಂತೆ ನಿಜವಾದ ಆದಾಯದ ಸ್ವೀಕೃತಿಯ ನಡುವಿನ ಅಂತರ ಮತ್ತಷ್ಟು ಹೆಚ್ಚಿದೆ ಎಂದು ಸರ್ಕಾರ ಹೇಳಿದೆ.
ಕಳೆದ 2017ರ ಜುಲೈ 1ರಂದು ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ನೀತಿ(ಜಿಎಸ್ಟಿ)ಯನ್ನು ಪರಿಚಯಿಸಲಾಯಿತು. ಐದು ವರ್ಷಗಳ ಅವಗೆ ಉSಖಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆ, 2017ರ ನಿಬಂಧನೆಗಳ ಪ್ರಕಾರ ಅನುಷ್ಠಾನದ ಖಾತೆಯಲ್ಲಿ ಉಂಟಾಗುವ ಯಾವುದೇ ಆದಾಯದ ನಷ್ಟಕ್ಕೆ ಪರಿಹಾರಕ್ಕಾಗಿ ರಾಜ್ಯಗಳಿಗೆ ಭರವಸೆ ನೀಡಲಾಗಿತ್ತು