ಧಾರವಾಡ: ಈ ಹಿಂದೆ ಮುಸ್ಲಿಂ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮೌಲ್ವಿ ತನ್ವೀರ್ ಪೀರಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಪೀರಾ ಅವರು ಐಸಿಸ್ ಉಗ್ರರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವಿಜಯಪುರ ಶಾಸಕ ಯತ್ನಾಳ್ ಆರೋಪ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದರು. ಇದೀಗ ಆ ಘಟನೆ ಯತ್ನಾಳ್ಗೆ ತಿರುಗುಬಾಣವಾದಂತೆ ಕಾಣುತ್ತಿದೆ. ಮೌಲ್ವಿ ತನ್ವೀರ್ ಪೀರಾ ಜೊತೆ ಯಾವುದೇ ವ್ಯವಹಾರ ಹೊಂದಿಲ್ಲ ಎಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇಲ್ಲಿನ ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ್ ಸಾಕ್ಷಿ ಬಿಡುಗಡೆ ಮಾಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪೀರಾ ಸೋದರ ಮಾವನೊಂದಿಗೆ ಯತ್ನಾಳ್ ಅವರ ವ್ಯವಹಾರದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ವಿಜಯಪುರದ ಎಂ.ಜಿ ರಸ್ತೆಯ ವಾರ್ಡ್ ನಂ.3ರಲ್ಲಿ ಹೋಟೆಲ್ ಟೂರಿಸ್ಟ್ ಕಟ್ಟಿದ್ದಾರೆ. ಇದನ್ನು ಎಂ.ಎಂ ಪೀರಜಾದೆ ಹಾಗೂ ಯತ್ನಾಳ್ ಒಡೆತನದಲ್ಲಿ ಕಟ್ಟಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ
ಪೀರಜಾದೆಯವರು ಪೀರಾ ಅವರ ತಾಯಿಯ ಸಹೋದರರಾಗಿದ್ದು, ಅವರೊಂದಿಗೆ ಯತ್ನಾಳ್ ಅವರಿಗೆ 30-40 ವರ್ಷಗಳ ವ್ಯವಹಾರಿಕ ಸಂಬಂಧವಿದೆ. ಪೀರಾ ಹಾಗೂ ಪೀರಜಾದೆ ಎಲ್ಲರೂ ಸೇರಿ ವ್ಯವಹಾರ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.