ವಿಜಯಪುರ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏ.13ರಿಂದ ನಾಮಪತ್ರ ಸ್ವೀಕರಿಸಲಿರುವ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಜಿಲ್ಲೆಯ ವಿವಿಧ ತಹಶೀಲ್ದಾರ ಕಚೇರಿಗಳಿಗೆ ಭೇಟಿ ನೀಡಿ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಅವರೊಂದಿಗೆ ಸಿಂದಗಿ ತಹಶೀಲ್ದಾರ ಕಾರ್ಯಾಲಯದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ಏ.13ರಿಂದ ನಾಮಪತ್ರ ಸ್ವೀಕರಾರ ಆರಂಭವಾಗಲಿದ್ದು, ಯಾವುದೇ ರೀತಿಯ ಲೋಪವಾಗದಂತೆ ಕಾರ್ಯನಿರ್ವಹಿಸಿ ಮುಂಚೆಯೇ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ ಅವರು, ನಾಮಪತ್ರ ಸ್ವೀಕಾರ ಸಂದರ್ಭದಲ್ಲಿ ಅಗತ್ಯ ಪೋಲಿಸ್ ಭದ್ರತೆ, 80ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ಮತದಾರರ ಮತದಾನ ವ್ಯವಸ್ಥೆ, ಏ.16ರಂದು ನಡೆಯುವ ಪಿ.ಆರ್.ಓ.ಮತ್ತು ಎಪಿಆರ್ಓ ಮತಗಟ್ಟೆ ಅಧಿಕಾರಿಗಳ ತರಬೇತಿ ಕುರಿತು ಕೈಗೊಳ್ಳಲಾದ ವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನಂತರ ದೇವರಹಿಪ್ಪರಗಿ ಹಾಗೂ ಇಂಡಿ ತಹಶೀಲ್ದಾರ ಕಾರ್ಯಾಲಯದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ನಾಮಪತ್ರ ಸ್ವೀಕಾರ ನಾಳೆ ಆರಂಭವಾಗುವುದರಿಂದ ಎಲ್ಲ ಮುಂಜಾಗ್ರತಾ ಕೈಗೊಳ್ಳಬೇಕು. ನಾಮಪತ್ರ ಸ್ವೀಕಾರಕ್ಕೆಸಂಬಂಧಿಸಿದ ನಮೂನೆಗಳನ್ನು ಕ್ರಮಬದ್ಧವಾಗಿಟ್ಟುಕೊಳ್ಳಬೇಕು. ಯಾವುದೇ ಲೋಪವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ ಅವರು ಮಾತನಾಡಿ, ನಾಮಪತ್ರ ಸ್ವೀಕಾರ ಆರಂಭವಾಗುವುದರಿಂದ ಜಿಲ್ಲೆಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಪೋಲಿಸ್ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಮತಕ್ಷೇತ್ರದ ನಿರ್ವಾಚಣಾಧಿಕಾರಿಗಳಾದ ಡಾ.ದುರಗೇಶ, ರಾಮಚಂದ್ರ ಗಡದೆ, ಸಿದ್ರಾಮ ಮಾರಿಹಾಳ ಸೇರಿದಂತೆ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.