ವಿಜಯಪುರ, ಅ.26: ಗೂಡ್ಸ್ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಪರಿಣಾಮ 15 ಮಂದಿ ಗಾಯಗೊಂಡಿದ್ದಾರೆ.
ತಾಲೂಕಿನ ಅಡವಿ ಹುಲಗಬಾಳ ಗ್ರಾಮದ ಬೀರಪ್ಪನ ಬೆಟ್ಟದಲ್ಲಿ ಜಾತ್ರೆ ಮತ್ತು ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಪರಿಣಾಮ ಇಬ್ಬರು ಮಕ್ಕಳು ಮತ್ತು ಮೂವರು ವೃದ್ಧರು ಸೇರಿದಂತೆ ಒಟ್ಟು 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯ ಶಾಸಕ ಮತ್ತು ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಜಾತ್ರಾ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದಾಗ, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ತಮ್ಮ ಸರ್ಕಾರಿ ವಾಹನವನ್ನು ಒದಗಿಸಿದರು ಮತ್ತು ಗಾಯಗೊಂಡವರನ್ನು ನೋಡಿಕೊಳ್ಳಲು ತಮ್ಮ ಆಪ್ತ ಸಹಾಯಕರು ಮತ್ತು ವೈಯಕ್ತಿಕ ಸಿಬ್ಬಂದಿಯನ್ನು ಕಳುಹಿಸಿದರು.
ಅವರೆಲ್ಲರಿಗೂ ಮುದ್ದೇಬಿಹಾಳದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಮತ್ತು ತುರ್ತು ಚಿಕಿತ್ಸೆ ನೀಡಲಾಗಿದೆ. ಇಬ್ಬರು ಮಹಿಳೆಯರ ಕಾಲುಗಳು ಮುರಿದಿವೆ ಎಂದು ಮೂಲಗಳು ತಿಳಿಸಿವೆ.