ವಿಜಯಪುರ: ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜೂ.21 ರಂದು ಮೊದಲ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಈ ವೇಳೆ ಸರ್ಕಾರಿ ಶಾಲಾ ಆವರಣದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಬಿಇಒ ಅಮಾನತಿಗೆ ಸಚಿವ ಎಂ.ಬಿ ಪಾಟೀಲ್ ಆದೇಶಿಸಿದ್ದಾರೆ.
ಜಿಲ್ಲೆಯ ಯರನಾಳ ಸರ್ಕಾರಿ ಶಾಲಾ ಆವರಣದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ಬಸವನಬಾಗೇವಾಡಿ ಬಿಇಒ ಶೇಖರ್ ಬಳಬಟ್ಟಿಯವರನ್ನ ಅಮಾನತು ಮಾಡಲು ಸಚಿವ ಎಂ.ಬಿ ಪಾಟೀಲ್ ಆದೇಶಿಸಿದ್ದಾರೆ.
ವಿಜಯಪುರ ಜಿಲ್ಲಾ ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಇಒ ವಿರುದ್ಧ ಸಚಿವ ಶಿವಾನಂದ ಪಾಟೀಲ್ ವಿಚಾರ ಪ್ರಸ್ತಾಪಿಸಿದ್ದರು. ಪರವಾನಗಿ ನೀಡದೇ ಬಿಇಒ ಶೇಖರ್ ಬಳಬಟ್ಟಿ ಉದ್ಧಟತನ ಮಾಡಿರುವ ಆರೋಪ ಕೇಳಿಬಂದಿದ್ದು, ತಕ್ಷಣವೇ ಬಿಇಒ ಸಸ್ಪೆಂಡ್ ಮಾಡಲು ಡಿಡಿಪಿಐಗೆ ಎಂ.ಬಿ.ಪಾಟೀಲ್ ಆದೇಶಿಸಿದ್ದಾರೆ.
ಇನ್ನು ವಿಜಯಪುರ ಜಿಲ್ಲಾ ವಿವಿಧ ಇಲಾಖಾ ಮಟ್ಟದ 1 ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಇದಾಗಿದ್ದು, ಬೃಹತ್ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ಎಂ ಬಿ ಪಾಟೀಲ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ವಿಜಯಪುರ ನಗರದಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಎಂದು ಆರೋಪಿಸಿದರು. ನೀರು ಪೂರೈಕೆ, ರಸ್ತೆ ಅಭಿವೃದ್ಧಿ, ಒಳಚರಂಡಿ ನಿರ್ಮಾಣ, ಯುಜಿಡಿ ಕೆಲಸ ಕುರಿತಂತೆ ವಾರ್ಡುಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ದಾನಮ್ಮನವರ್ ಮೌನ ವೀಕ್ಷಕರಾಗಿದ್ದೀರಿ, ಬೇಕಿದ್ದರೆ ಈ ಬಗ್ಗೆ ದಾಖಲಾತಿ ಅಂಕಿ-ಅಂಶಗಳನ್ನ ತರಿಸಿ ನಾನಿಲ್ಲಿ ಮಾತನಾಡಬಲ್ಲೆ, ಇಂಥದ್ದನ್ನೆಲ್ಲ ನಮ್ಮ ಕಾಂಗ್ರೆಸ್ ಸರಕಾರ ಸಹಿಸುವುದಿಲ್ಲ ಎಂದು ಕೆಡಿಪಿ ಸಭೆಯಲ್ಲಿ ಸಚಿವ ಎಂ ಬಿ ಪಾಟೀಲ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.