ವಿಜಯಪುರ: ಮೋದಿ ಅವರು ಕೋಟ್ಯಧಿಪತಿಗಳಿಗೆ ಕೊಟ್ಟಿರುವ ಹಣವನ್ನು ತಂದು ರೈತರಿಗೆ ಹಂಚಲು ಯೋಚಿಸಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅವರು ವಿಜಯಪುರದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಕೈ ಅಭ್ಯರ್ಥಿ ರಾಜು ಅಲಗೂರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ 20 ಮಂದಿ ಶ್ರೀಮಂತರನ್ನ ಮಾತ್ರ ಬೆಳೆಸಿದೆ. ಅದಾನಿ ಅವರಿಗೆ ಭಾರತದ ದೊಡ್ಡ ದೊಡ್ಡ ಯೋಜನೆಗಳನ್ನ ಕೊಟ್ಟಿದ್ದಾರೆ. ಬಡವರಿಗೆ ಏನು ಕೊಟ್ಟಿದ್ದಾರೆ? ಆದ್ರೆ ನಮ್ಮ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಬಡವರಿಗಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದೆ. ಆದರಿಂದ ಸಾಕಷ್ಟು ಉಪಯೋಗ ಆಗಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಈಗ ಕೋಟ್ಯಧಿಪತಿಗಳನ್ನು ಲಕ್ಷಾಧಿಪತಿಗಳಾಗಿ ಮಾಡಲು ಹೊರಟಿದೆ. ಎಷ್ಟು ಹಣ ಮೋದಿ ಅವರು ಈ ಕೋಟ್ಯಧಿಪತಿಗಳಿಗೆ ಕೊಟ್ಟಿದ್ದಾರೋ ಅದನ್ನ ರೈತರಿಗೆ ಕೊಡಲು ಯೋಚಿಸಿದ್ದೇವೆ.
ಬಡವರು ಆರ್ಥಿಕವಾಗಿ ಸಬಲರಾಗುವವರೆಗೂ ಅವರಿಗೆ ಹಣ ಕೊಡುತ್ತೇವೆ. ಮೋದಿಯವರು ಕೋಟ್ಯಾಧೀಶರಿಗೆ ಕೆಲಸ ಕೊಟ್ಟು, ಬಡವರಿಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡುತ್ತೇವೆ.
ಪ್ರಧಾನಿ ಮೋದಿಗೆ ಈಗಾಗಲೇ ಭಯ ಶುರುವಾಗಿದೆ. ಅದಕ್ಕಾಗಿ ಅವರು ಬೇರೆ-ಬೇರೆ ವಿಚಾರ ಮಾತನಾಡ್ತಾರೆ. ಒಮ್ಮೆ ಚೀನಾ ಮತ್ತೊಮ್ಮೆ ಪಾಕಿಸ್ತಾನದ ಬಗ್ಗೆ ಮಾತನಾಡಿ ದಿಕ್ಕು ತಪ್ಪಿಸುತ್ತಾರೆ. ಭಾರತದಲ್ಲಿ ಎದುರಿಸಬೇಕಾದ ಸವಾಲುಗಳು ಅನೇಕ ಇವೆ.
ಕಳೆದ 10 ವರ್ಷಗಳಲ್ಲಿ ಬಡವರನ್ನು ಉದ್ಧಾರ ಮಾಡಿದ್ದೇವೆ ಎಂದು ಹೇಳುವ ಮೋದಿ ಬಡವರಿಂದಲೇ ಹಣ ಕಸಿದುಕೊಂಡಿದ್ದಾರೆ ಎಂದರು.