ಆಲೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ “ಮತದಾನ” ಪ್ರಕ್ರಿಯೆಯಲ್ಲಿನ ಪ್ರತಿಯೊಬ್ಬರ ಭಾಗವಹಿಸುವಿಕೆ ಬಹಳ ಮುಖ್ಯ ಎಂದು ತಾಲೂಕು ಜೆಎಂಎಫ್ಸಿ ನ್ಯಾಯದೀಶರಾದ ಎಂ.ಸಿ. ನಿರ್ಮಲ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಸ್ವೀಪ್ ಸಮಿತಿ ಹಾಗೂ ಕಾನೂನು ಪ್ರಾಧಿಕಾರದಿಂದ ನಡೆದ ’ ರಾಷ್ಟ್ರೀಯ ಮತದಾರರ ದಿನ ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಸಹಭಾಗಿತ್ವ ಬಹಳ ಪ್ರಮುಖವಾಗಿದೆ, ಪ್ರಸ್ತುತ ದಿನಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಮತದಾನವನ್ನು ಹೆಚ್ಚಿಸಲು ಮತದಾರರ ನೋಂದಣಿ ಮತ್ತು ಮತದಾನಕ್ಕೆ ಪ್ರೇರಣೆ ನೀಡುವಂತ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದ ಅವರು ಪ್ರತಿಜ್ಞಾ ವಿಧಿ ಭೋದಿಸಿದರು.
ತಹಸೀಲ್ದಾರ್ ಕೆ ಸಿ ಸೌಮ್ಯ ಮಾತನಾಡಿ, ಪ್ರತಿಯೊಬ್ಬ ಮತದಾರರು ಚುನಾವಣೆ ಗಳಲ್ಲಿನ ಮತದಾನದಲ್ಲಿ ಭಾಗವಹಿಸಿ ” ಮತದಾನ ” ವನ್ನು ಮಾಡುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಹಾಗೂ ಮತದಾನದ ಮಹತ್ವ, ಮತ ಚಲಾವಣೆಯ ಮಹತ್ವದ ಬಗ್ಗೆ ಯುವ ಪೀಳಿಗೆಗೆ ತಿಳಿಸುವಂತ ಕೆಲಸವಾಗಬೇಕು ಎಂದ ಅವರು ೧೮ ವರ್ಷ ತುಂಬಿದ ಪ್ರತಿಯೊಬ್ಬ ಯುವ ಮತದಾರರು ಮತದಾನದ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ಮುಖ್ಯ ಬಾಷಣಕಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರದ್ಯಾಪಕ ಶಿವಪ್ರಸಾದ್ ಮಾತನಾಡಿ, ಮತ ಚಲಾವಣೆಯ ಮಹತ್ವ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಮತದಾನದ ಕುರಿತಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಜೆ ಎಂ ಎಫ್ ಸಿ ನ್ಯಾಯದೀಶರಾದ ಎಂ ಸಿ ನಿರ್ಮಲ, ತಹಶೀಲ್ದಾರ್ ಕೆ ಸಿ ಸೌಮ್ಯ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಣಾಧಿಕಾರಿ ನಾರಾಯಣ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರೇಶ್, ಸಿ ಡಿ ಪಿ ಒ ಮಲ್ಲೇಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹಿಂದ್ರ, ಕಾರ್ಯದರ್ಶಿ ಸುರೇಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಧ್ಯಾಪಕ ಶಿವಪ್ರಸಾದ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ(ನರೇಗಾ) ಕೇಶವ ಮೂರ್ತಿ, ಚುನಾವಣಾ ಶಾಖೆ ಶಿರಸ್ತಿದಾರ್ ಮಂಜುಳಾ, ಧರ್ಮ, ಶಿವಾನಂದ್ ಸೇರಿದಂತೆ ಬಿ ಎಲ್ ಒ ಗಳು, ಎಲ್ಲ ಇಲಾಖೆಗಳ ಅಧಿಕಾರಿಗಳು, ಹಾಗೂ ವಿದ್ಯಾರ್ಥಿಗಳು ಇದ್ದರು.