ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕೋಳೂರು ಗ್ರಾಮ ವ್ಯಾಪ್ತಿಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಹೊಲದಲ್ಲಿನ ಬೆಳೆಗೆ ನೀರು ಹಾಯಿಸಲು ಮೋಟಾರ್ ಚಾಲೂ ಮಾಡಲು ಹೋಗಿದ್ದ ರೈತನೊಬ್ಬ ವಿದ್ಯುತ್ ಶಾಕ್ ತಗುಲಿ ಗಾಭರಿಗೊಂಡು ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ನಿನ್ನೆ ಸಂಜೆಯೇ ನಡೆದಿದ್ದು ಶವ ಕಾಲುವೆಯಲ್ಲಿ ತೇಲಿಕೊಂಡು ಕೆಸಾಪೂರ ಗ್ರಾಮದ ಬಳಿ ಬಂದಾಗ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತ ರೈತನನ್ನು ಕೋಳೂರು ಗ್ರಾಮದ ಹಣಮಂತ ಭೀಮಶೆಪ್ಪ ಹದ್ದಿನ (54) ಎಂದು ಗುರ್ತಿಸಲಾಗಿದೆ. ಮೃತನಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ.
1.5 ಎಕರೆ ಜಮೀನು : ಮೃತ ರೈತನಿಗೆ 4 ಎಕರೆ ಜಮೀನು ಇತ್ತು. ಕಾಲುವೆ ನಿರ್ಮಾಣದಲ್ಲಿ ಅಂದಾಜು 2 ಎಕರೆಗೂ ಹೆಚ್ಚು ಜಮೀನು ಮುಳುಗಡೆ ಆಗಿತ್ತು. ಇದ್ದ ಒಂದೂವರೆ ಎಕರೆ ಜಮೀನಿನಲ್ಲಿ ಬೇಸಿಗೆ ಶೇಂಗಾ ಬೆಳೆದಿದ್ದ. ಇದಕ್ಕೆ ಕಾಲುವೆ ನೀರನ್ನು ಅವಲಂಬಿಸಿದ್ದ. ಮುಖ್ಯ ಕಾಲುವೆಯಿಂದ ನೀರೆತ್ತಿ ಹೊಲಕ್ಕೆ ಹರಿಸಲು ವಿದ್ಯುತ್ ಚಾಲಿತ ಮೋಟಾರ್ ಅಳವಡಿಸಿದ್ದ. ಈ ಮೋಟಾರ್ ಚಾಲೂ ಮಾಡಲು ಹೋದಾಗ ಶಾಕ್ ಹೊಡೆದಂತಾಗಿ ಗಾಭರಿಯಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ. ಬಿದ್ದ ಜಾಗದಲ್ಲಿ ಕಾಲುವೆಯ ಆಳ ಹೆಚ್ಚಾಗಿದ್ದು, ನೀರಿನ ಒತ್ತಡವೂ ಬಹಳಷ್ಟಿರುವುದರಿಂದ ಆತ ಸಾವನ್ನಪ್ಪಿದ್ದಾನೆ. ಶವ ನೀರಿನ ಸೆಳವಿಗುಂಟ ಹರಿದು ಹೋಗಿದ್ದರಿಂದ ತಕ್ಷಣಕ್ಕೆ ಸಿಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.