ಬೆಳಗಾವಿ: ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದ ನದಿ ಸೇತುವೆ ಮೇಲೆ 13 ಜನರನ್ನು ಹೊತ್ತು ಬರುತ್ತಿದ್ದ ಟ್ರಾಕ್ಟರ್‌ವೊಂದು ಮಗುಚಿಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ನಂದಗಾಂವ್ ಬಳಿ ದುರ್ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ನಂದಗಾಂವ್ ಗ್ರಾಮದ ಮಧ್ಯೆ ಇರುವ ಬ್ರಿಡ್ಜ್ ಕಮ್ ಬ್ಯಾರೇಜ್‌ ಮೇಲೆ ಬಂದಾಗ ಟೈಲರ್ ಸಮೇತ ಟ್ರಾಕ್ಟರ್ ನೀರಿಗೆ ಬಿದ್ದಿದೆ. ನೀರಿಗೆ ಬಿದ್ದೊಡನೆ 12 ಮಂದಿ ಈಜಿಕೊಂಡು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಓರ್ವ ನೀರಲ್ಲಿ ಕಣ್ಮರೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಅವರಾದಿಯಿಂದ ನಂದಗಾಂವ್‌ಗೆ ಕೂಲಿ ಕೆಲಸಕ್ಕೆಂದು‌ ಕಾರ್ಮಿಕರು ಟ್ರಾಕ್ಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ನದಿ ದಾಟುವಾಗ ಆಯತಪ್ಪಿ ಘಟಪ್ರಭಾ ನದಿಗೆ ಟ್ರಾಕ್ಟರ್ ಬಿದ್ದಿದೆ.

ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಲ್ಲಿ ಕೊಚ್ಚಿ ಹೋದವನಿಗಾಗಿ ಹುಡುಕಾಟ ನಡೆಯುತ್ತಿದೆ. ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.