ಬೆಳಗಾವಿ : ಕೆಲಸದೊತ್ತಡ ಹಾಗೂ ಡ್ಯೂಟಿ ಬದಲಾಯಿಸಿದ್ದಕ್ಕೆ ಮನನೊಂದ ಬಸ್​​ ಮೆಕ್ಯಾನಿಕ್ ಒಬ್ಬರು ಬಸ್ ನಲ್ಲೇ ನೇಣಿಗೆ ಶರಣಾಗಿರುವ ಘಟನೆ ಕೆಎಸ್​​ಆರ್​ಟಿಸಿ ಬೆಳಗಾವಿ ಡಿಪೋ 1ರಲ್ಲಿ ನಡೆದಿದೆ.

ಬೆಳಗಾವಿಯ ಹಳೇ ಗಾಂಧಿನಗರದ ನಿವಾಸಿ ಕೇಶವ ಕಮಡೊಳಿ (57) ಮೃತ ದುರ್ದೈವಿ ಎನ್ನಲಾಗಿದೆ. ಕೆಎಸ್​​ಆರ್​ಟಿಸಿ ಬಸ್​ ವಾಶಿಂಗ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೇಶವ್ ಅವರಿಗೆ ಬೆನ್ನು ನೋವಿದ್ದರೂ ಅಧಿಕಾರಿಗಳು ಪಂಚರ್​​ ಕೆಲಸಕ್ಕೆ ಬದಲಾಯಿಸಲಾಗಿತ್ತು.

ಡ್ಯೂಟಿ ಬದಲಾಯಿಸಿದಂತೆ ಡಿಪೋ ಮ್ಯಾನೇಜರ್​​ ಲಿಂಗರಾಜ ಲಾಠಿ ಅವರು ಸಹಾಯಕ ಕಾರ್ಯ ಅಧೀಕ್ಷಕ ಅನಿಲ್​​​ ಬಾಂದೇಕರ್​ ಅವರ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೂ ಕೂಡ ಕೆಲಸ ಬದಲಾಯಿಸಿದಕ್ಕೆ ಕೇಶವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಡಿಪೋ ಅಧಿಕಾರಿಗಳು ಕೇಶವ್ ಮಾನಸಿಕ ಅಸ್ವಸ್ಥ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಹೇಳಿಕೆ ಖಂಡಿಸಿ ಮೃತನ ಕುಟುಂಬಸ್ಥರು ಕಿಡಿಕಾರಿದ್ದು, ಯಾವ ಆಧಾರದಲ್ಲಿ ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದೀರಿ, ಹುಷಾರಿಲ್ಲ ಡ್ಯೂಟಿ ಬದಲಿಸಬೇಡಿ ಎಂದು ಮನವಿ ಮಾಡಿದರು ಕೂಡ ಕೆಲಸ ಬದಲಾಯಿಸಿದ್ದೀರಿ, ಈಗ ಮಾನಸಿಕ ಅಶ್ವತ್ಥ ಎಂದು ಸುಳ್ಳು ಹೇಳಿಕೆ ನೀಡಿದ್ದೀರಿ ಎಂದು ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.