ಹಾವೇರಿ: ಬ್ಯಾಡಗಿ ಪಟ್ಟಣದಲ್ಲಿ ರೈತರ ಕಿಚ್ಚು ಇನ್ನೂ ತಣ್ಣಗಾಗಿಲ್ಲ. ನಿನ್ನೆ ಎಪಿಎಂಸಿ ಮಾರುಕಟ್ಟೆಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಡಗಿಗೆ ಬರುವ ಮಾರ್ಗದಲ್ಲಿ ಪೊಲೀಸರು, ಮೆಣಸಿನ ಕಾಯಿ ತುಂಬಿದ ಲಾರಿಗಳು, ವಾಹನಗಳನ್ನ ತಪಾಸಣೆ ಮಾಡಿದ್ದಾರೆ. ಈ ವೇಳೆ ಟಾಟಾ ಏಸ್ ಚಾಲಕನಿಗೆ ರೈತರು ಕಲ್ಲಿನಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಇನ್ನು ಗಲಾಟೆಯಲ್ಲಿ ಹಾವೇರಿ ಎಸ್ಪಿ ಅಂಶುಕುಮಾರ್ ಅವರ ಕೈಗೆ ಗಾಯವಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಆಗಮಿಸಿದ ಎಸ್ಪಿ ತಲೆಗೆ ಕೆಲ ಕಿಡಿಗೇಡಿಗಳು ದೊಣ್ಣೆಯಿಂದ ಹೊಡೆದಿದ್ದು, ಹೆಲ್ಮೆಟ್ ಹಾಕಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಈವರೆಗೂ 47 ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಮೆಣಸಿನಕಾಯಿ ಬೆಲೆ ಕುಸಿತದಿಂದ ರೊಚ್ಚಿಗೆದ್ದ ಕೆಲ ಜನರು ಮಾರುಕಟ್ಟೆಗೆ ಬೆಂಕಿಯಿಟ್ಟು ಪುಂಡಾಟ ಮೆರೆದಿದ್ದರು. ಇದರ ಪರಿಣಾಮ 6 ಕಾರು, 3 ಬೈಕ್, 1 ಅಗ್ನಿಶಾಮಕ ವಾಹನ, ಹಾಗೂ ಆಡಳಿತ ಕಚೇರಿ ಸುಟ್ಟು ಭಸ್ಮವಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಿದ 47 ಕೀಡಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.