ಹಾವೇರಿ: ರಾಣೇಬೆನ್ನೂರ ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದ ಪ್ರಗತಿಪರ ರೈತ ಚಂದ್ರಶೇಖರ ಮೇವುಂಡಿ ಅವರ ಕ್ಷೇತ್ರದ ಗೋವಿನ ಜೋಳದ ಬೆಳೆಯ ತಾಕಿಗೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಅಶೋಕ ಪಿ ಹಾಗೂ ಮಣ್ಣು ವಿಜ್ಞಾನಿ ಡಾ. ರಾಜಕುಮಾರ ಜಿ. ಆರ್ ಅವರು ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ತಾಂತ್ರಿಕ ಸಲಹೆಯನ್ನು ನೀಡಿದರು.
ಕಳೆದ ಹತ್ತು ದಿನಗಳಿಂದ ಸತತ ಮಳೆಯಿಂದಾಗಿ ಗೋವಿನಜೋಳದ ಬೆಳೆಗೆ ರೈತರ ಕ್ಷೀತ್ರಗಳಲ್ಲಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಹಾಗೂ ಪೋಷಕಾಂಶಗಳ ಕೊರತೆಯಿದ್ದಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುತ್ತವೆ. ಹಾವೇರಿ ಜಿಲ್ಲೆಯ ಎಲ್ಲಾ ಒಳು ತಾಲ್ಲೂಕುಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು. ಸೂತ್ತ ಮುತ್ತಲಿನ ರೈತರ ಗೋವಿನ ಜೋಳದ ಕ್ಷೇತ್ರಕ್ಕೆ ಬೇಟಿ ನೀಡಿ ಈ ಬೆಳೆಯಲ್ಲಿ ಕಂಡು ಬರುವ ಪೋಷಕಾಂಶಗಳ ಕೊರತೆ ಬಗ್ಗೆ ವಿವರಿಸಿ, ಹೊಲದಲ್ಲಿ ಅಲ್ಲಲ್ಲಿ ಕಾಲುವೆಗಳನ್ನು ಮಾಡಿ ಹೆಚ್ಚಾದ ನೀರನ್ನು ಬಸಿದು ಹೋಗುವಂತೆ ಮಾಡಬೇಕು. ಮಳೆ ನಿಂತ ಮೇಲೆ ಬೆಳೆಗಳ ಚೈತನ್ಯಕ್ಕೆ ಆಯಾ ಬೆಳೆಗಳಿಗೆ ಸಿಫಾರಿಸ್ಸಿನಂತೆ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು ಹೇಳಿದರು.
ಎಲೆಗಳು ಕೆಂಪಾಗಿ ಕಾಣುತ್ತಿದ್ದು ಇದು ರಂಜಕದ ಕೊರತೆಯಾಗಿರುತ್ತದೆ. ಜೊತೆಗೆ ಎಲೆಯ ಅಂಚಿನಲ್ಲಿ ಮತ್ತು ಮಧ್ಯದ ಭಾಗದಲ್ಲಿ ಬಿಳಿಯ ಪಟ್ಟಿಗಳು ಕಾಣಿಸುತ್ತಿದ್ದು ಇದು ಸತುವಿನ ಕೊರತೆ ಆಗಿರುತ್ತದೆ. ಈ ಪೋಷಕಾಂಶಗಳು ಈ ಬೆಳೆಯ ಎಲೆಗಳು ಕೆಂಪಾಗಿ ಮತ್ತು ಬೆಳ್ಳಗೆ ಕಂಡುಬಂದ ತಕ್ಷಣ 19:19:19 ನೀರಿನಲ್ಲಿ ಕರಗುವ ರಸಗೊಬ್ಬರ (ಪ್ರತಿ ಲೀಟರ್ ನೀರಿಗೆ 5 ಗ್ರಾಂ) ಹಾಗು ಜಿಂಕ್ ಸಲ್ಫೇಟ್ (ಪ್ರತಿ ಲೀಟರ್ ನೀರಿಗೆ 2.5 ಗ್ರಾಂ) ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.
ತದನಂತರ 15 ದಿವಸಗಳ ನಂತರ ಕೊರತೆ ಇದ್ದರೆ ಮತ್ತೊಮ್ಮೆ ಸಿಂಪರಣೆ ಮಾಡುವ ಅವಶ್ಯಕತೆ ಇದೆ. ಸತತ ಮಳೆಯಿಂದ ಬೆಳೆಗಳಲ್ಲಿ ಕಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ ಆಯಾ ಬೆಳೆಗಳಿಗೆ ಸಿಫಾರಸ್ಸು ಮಾಡಿರುವ ಕಳೆನಾಶಕಗಳನ್ನು ಸಿಂಪರಣೆ ಮಾಡಿ ಕಳೆಗಳನ್ನು ನಿರ್ವಹಣೆ ಮಾಡುವುದು. ಹವಾಮಾನ ಪರಿಸ್ಥಿತಿ ನೋಡಿಕೊಂಡು ಕಳೆನಾಶಕ ಸಿಂಪರಣೆ ಕೈಗೊಳ್ಳಬಹುದು. ಗೋವಿನ ಜೋಳದ ಬೆಳೆಯಲ್ಲಿ ಕಳೆ ನಿಯಂತ್ರಣೆಗಾಗಿ ಕಳೆಗಳನ್ನು ಸೂಕ್ತ ಕಳೆನಾಶಕಗಳನ್ನು ಬಳಸಿ ನಿಯಂತಿಸಬಹುದು ಎಂದು ಹೇಳಿದರು.
ಗ್ರಾಮದ ಪ್ರಗತಿಪರ ರೈತರಾದ ರಾಜಶೇಖರ ಅಕ್ಕೂರ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.