ಹಾವೇರಿ : ಉಕ್ರೇನ್ ದೇಶದಲ್ಲಿ ಶೆಲ್ ದಾಳಿಯಿಂದ ಅಮಾಯಕ ನವೀನ್ ಮೃತಪಟ್ಟಿದ್ದು ನಮ್ಮೆಲ್ಲರಿಗೂ ಆಘಾತ ಉಂಟುಮಾಡಿದೆ. ತಂದೆ-ತಾಯಿಗೆ ತೀವ್ರ ಆಘಾತವಾಗಿದ್ದು, ಮೃತದೇಹ ತರಲು ಸತತ ಪ್ರಯತ್ನ ಮಾಡಲಾಗುತ್ತಿದೆ. ಇದರೊಂದಿಗೆ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ಜೀವ ರಕ್ಷಣೆಯೊಂದಿಗೆ ಅವರನ್ನು ದೇಶಕ್ಕೆ ಕರೆತರಲು ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಷಿ ಅವರು ಹೇಳಿದರು.
ರಾಣೇಬೆನ್ನೂರು ತಾಲೂಕು ಚಳಗೇರಿ ಗ್ರಾಮದಲ್ಲಿ ಬುಧವಾರ ಪಾಲಕರಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಾಂಗ ಸಚಿವ ಜಯಶಂಕರ ಅವರೊಂದಿಗೆ ಫೆ.24 ರಿಂದ ಸಂಪರ್ಕದಲ್ಲಿದ್ದೇನೆ ಹಾಗೂ ಮಾನ್ಯ ಪ್ರಧಾನ ಮಂತ್ರಿಗಳು ಈ ಕಾರ್ಯಕ್ಕಾಗಿ ನಾಲ್ಕು ಜನ ಮಂತ್ರಿಗಳನ್ನು ಗಡಿ ರೇಖೆಗೆ ನೇಮಕಮಾಡಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಶೆಲ್ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಾಕಿ ವಿದ್ಯಾರ್ಥಿಗಳ ಹಾಗೂ ಮೃತದೇಹ ತರಲು ಸಮಸ್ಯೆಯಾಗಿದೆ. ಸ್ವಲ್ಪ ಬಿಡುವು ನೀಡಲು ಉಕ್ರೇನ್ ಹಾಗೂ ರಷ್ಯಾ ದೇಶಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.