ಗದಗ: ರಾಜಕಾರಣಕ್ಕಾಗಿ ಕೆಲವರನ್ನು ತುಷ್ಟಿಕರಣ ಮಾಡಲು ಆರೆಸ್ಸೆಸ್ಸನ್ನು ದೋಷಿಸುವುದು ಕೆಲವು ರಾಜಕಾರಣಿಗಳ ಚಾಳಿಯಾಗಿದೆ. ಈಗ ಉಪಚುನಾವಣೆಗಳು ಹತ್ತಿರವಿರುವುದರಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೂ ಈ ಚಾಳಿ ಕಾಡುತ್ತಿರಬಹುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತಿರುಗೇಟು ನೀಡಿದ್ದಾರೆ.
ಆರ್. ಎಸ್. ಎಸ್. ಕೋಟ್ಯಾಂತರ ಜನರಿಗೆ ದೇಶ ಸೇವೆಯ ಬಗ್ಗೆ ಮತ್ತು ಆಪತ್ತಿನ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಸೇವೆ ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಪಾಠ ಹೇಳಿಕೊಟ್ಟಿದೆಯೇ ವಿನಃ ಎಂದಿಗೂ ವಂಶಪಾರಂಪರ್ಯ ಅಥವಾ ಕುಟುಂಬ ರಾಜಕಾರಣವನ್ನು ಬೋಧಿಸಿಲ್ಲ.
ಆರೆಸ್ಸೆಸ್ ಈ ದೇಶದ ದೊಡ್ಡ ಅಪ್ರತಿಮ ಸಂಘಟನೆಯಾಗಿದೆ. ಈ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೂ ಎಷ್ಟೋ ಜನ ಯಾವುದೇ ಚುನಾವಣಾ ರಾಜಕೀಯಕ್ಕೆ ಆಗಲಿ ಅಥವಾ ಅಧಿಕಾರಕ್ಕಾಗಲೀ ಗಂಟು ಬಿದ್ದಿಲ್ಲ ಎಂಬುದು ಕುಟುಂಬ ರಾಜಕಾರಣದಲ್ಲಿರುವ ಕುಮಾರಸ್ವಾಮಿಯವರಿಗೆ ಅರ್ಥವಾಗಬೇಕಿತ್ತು.
ಆರ್. ಎಸ್. ಎಸ್. ನ ಸೇವಾ ಮನೋಭಾವವನ್ನು ಈ ಹಿಂದೆ ದೇವೇಗೌಡರೇ ಸ್ವತಹ ಮನಃ ಪೂರ್ತಿಯಾಗಿ ಪ್ರಶಂಶಿಸಿದ್ದರು ಎಂಬುದನ್ನು ಕುಮಾರಸ್ವಾಮಿ ಅವರು ನೆನಪು ಮಾಡಿಕೊಂಡರೆ ಸಾಕು ಎಂದು ಸಚಿವ ಸಿ.ಸಿ.ಪಾಟೀಲರು ಚಾಟಿ ಬೀಸಿದ್ದಾರೆ.