ಧಾರವಾಡ: ಮಳೆ, ಗಾಳಿ ಇಲ್ಲದಿದ್ದರೂ ಮರವೊಂದು ನೆಲಕ್ಕುರುಳಿದ ಪರಿಣಾಮ ಆಟೋ ಒಂದು ಜಖಂಗೊಂಡಿರುವ ಘಟನೆ ಧಾರವಾಡದ ಹಳಿಯಾಳ ನಾಕಾದಲ್ಲಿ ಸಂಭವಿಸಿದೆ.
ತುಂಬಾ ಹಳೆಯದಾಗಿದ್ದ ಈ ಮರ ಬುಡದಲ್ಲಿ ಕೊಳೆತ ಸ್ಥಿತಿಯಲ್ಲಿತ್ತು. ಇಂದು ಏಕಾಏಕಿ ಬುಡ ಸಮೇತ ನೆಲಕ್ಕುರುಳಿದ್ದು, ಅದರ ಬುಡದಲ್ಲಿದ್ದ ಆಟೋ ಜಖಂಗೊಂಡಿದೆ.
ಯಶವಂತ ಯಾದವಾಡ ಎಂಬುವವರಿಗೆ ಸೇರಿದ ಆಟೋ ಇದಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಪರಿಣಾಮ ರಸ್ತೆ ತುಂಬ ವಿದ್ಯುತ್ ತಂತಿಗಳು ಹರಿದು ಬಿದ್ದಿವೆ. ಮರ ಬಿದ್ದ ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು, ಹೆಸ್ಕಾಂನವರು ಹಾಗೂ ಪಾಲಿಕೆಯವರು ಭೇಟಿ ನೀಡಿ ಮರ ತೆರವುಗೊಳಿಸುವ ಕೆಲಸ ಮಾಡಿದರು.