ಹುಬ್ಬಳ್ಳಿ: ಅಮಿತ್ ಶಾ ಹೇಳಿದ್ದಕ್ಕೆ ರಾಜ್ಯ ಬಿಜೆಪಿ ನಾಯಕರು ಕೋಲೆ ಬಸವನಂತೆ ತಲೆ ಅಲ್ಲಾಡಿಸುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ವರ್ಷಗಳ ಹಿಂದೆಯಷ್ಟೇ ಕಾಂಗ್ರೆಸ್ಗೆ ಹೋಗಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್ ಇತಿಹಾಸ ತೆಗೆದು ನೋಡಲಿ. ಏಕೆಂದರೆ, ಕಾಂಗ್ರೆಸ್ನಲ್ಲಿ ಇಂದಿರಾ ಬಿಟ್ಟರೆ ಯಾರೂ ಗಂಡಸರಿಲ್ಲ ಅನ್ನೋ ಮಾತಿತ್ತು ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಾರು ಬೇಕಾದರೂ ಬಂದು ಕಾಂಗ್ರೆಸ್ ಸೇರಿ ಅಂತಾ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳುತ್ತಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವವರು ಯಾರಿದ್ದಾರೆ ಎಂದು ಕೇಳಿದರು. ಅಲ್ಲದೆ, ಮೂಲ ಕಾಂಗ್ರೆಸ್ಸಿಗರೇ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರುತ್ತಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಭ್ರಮೆಯಲ್ಲಿದ್ದಾರೆ ಎಂದರು.
ಮುಂದಿನ ಒಂಬತ್ತು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ಕೊಟ್ಟ ಶೆಟ್ಟರ್, ಇದು ಕಾಂಗ್ರೆಸ್ನ ಕೊನೆಯ ಸರ್ಕಾರ. ಮುಂದೆ ಯಾವತ್ತೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.
ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಜಗದೀಶ್ ಶೆಟ್ಟರ್, ಈ ಬಗ್ಗೆ ಇನ್ನು ಅಧಿಕೃತವಾಗಿ ಯಾವುದೇ ಘೋಷಣೆ ಆಗಿಲ್ಲ. ಗೊಂದಲಗಳ ವಿಚಾರ ಕೇವಲ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತೆ ಅಷ್ಟೇ ಎಂದರು. ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್ ಟಿಕೆಟ್ ಬೇಡಿಕೆ ಇಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಎಲ್ಲವೂ ಸದ್ಯದಲ್ಲೇ ಇತ್ಯರ್ಥ ಆಗಲಿದೆ ಎಂದರು.
ಈ ಮಾಸಾಂತ್ಯದಲ್ಲಿ 100 ಸೀಟು ಘೋಷಣೆ ವಿಚಾರ ಕೇವಲ ಮಾಧ್ಯಮ ಸೃಷ್ಟಿ ಅಷ್ಟೇ. ಅಲ್ಲಿಯವರೆಗೂ ಕಾದು ನೋಡಬೇಕು ಎಂದರು. ಮಹದಾಯಿ ವಿಚಾರದಲ್ಲಿ ಬಿಜೆಪಿ ನಾಯಕರ ವಿಜಯೋತ್ಸವ ವಿಚಾರವಾಗಿ ಮಾತನಾಡಿದ ಶೆಟ್ಟರ್, ಈ ವಿಚಾರದಲ್ಲಿ ಸರ್ವ ಪಕ್ಷದಿಂದ ಸ್ಪಷ್ಟ ನಿರ್ಧಾರವಾದಾಗ ಮಾತ್ರ ಎಲ್ಲವೂ ಬಗೆ ಹರಿಯಲಿದೆ ಎಂದರು.