ಹುಬ್ಬಳ್ಳಿ: ನಗರದಲ್ಲಿ ನಡೆದ ‘ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆಕಸ್ಮಿಕ ಎಂದು ಹೇಳಿಕೆ ನೀಡಿರುವ ಗೃಹ ಸಚಿವ ಜಿ. ಪರಮೇಶ್ವರ ಅವರು, ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಬಿನೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳು ಶವ ಇಟ್ಟು ಪ್ರತಿಭಟನೆ ಮಾಡಿ ಆಗ್ರಹಿಸಿವೆ.
ನಗರದ ಎರಡೆತ್ತಿನಮಠದ ಎದುರು ನೇಹಾ ಅವರ ಪಾರ್ಥಿವ ಶವ ಇಟ್ಟು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ‘ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು, ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಖಂಡನೀಯ. ವಿದ್ಯಾರ್ಥಿನಿ ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಲವ್ ಜಿಹಾದ್ ಮತ್ತು ಭಯೋತ್ಪಾದಕರನ್ನು ನೀವು ಬ್ರದರ್ಸ್ ಎನ್ನುತ್ತೀರಿ. ಆಕಸ್ಮಿಕ ಎನ್ನಲು ಇದು ಅಪಘಾತವೇ? ಪ್ರೀತಿ ಮಾಡುವುದಿಲ್ಲ ಎಂದರೆ ಕೊಲೆ ಮಾಡಬೇಕೆ? ಗೃಹ ಸಚಿವರು ತಮ್ಮ ಹೇಳಿಕೆಗೆ ತಕ್ಷಣ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.