ಹುಬ್ಬಳ್ಳಿ: ಚಂದ್ರಶೇಖರ ಗುರೂಜಿಯನ್ನು ನನ್ನ ಗಂಡ ಕೊಲೆ ಮಾಡಲು ಕಾರಣವೇನು ಎಂದು ಗೊತ್ತಿಲ್ಲ. ಗುರೂಜಿ ಬಹಳ ಒಳ್ಳೆಯವರು. ಅವರನ್ನು ಕೊಲೆ ಮಾಡುವಾಗ ಮೂಲಕ ನನ್ನ ಗಂಡ ತಪ್ಪು ಮಾಡಿದ್ದಾರೆ. ಹೀಗೆಂದು ಕಣ್ಣೀರಾದರು ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿ ಮಹಾಂತೇಶ ಶಿರೂರ ಅವರ ಪತ್ನಿ ವನಜಾಕ್ಷಿ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 2005 ರಲ್ಲಿ ಸರಳ ಜೀವನ ಸಂಸ್ಥೆ ಸೇರಿಕೊಂಡಿದ್ದೆ. 2019ರಲ್ಲಿ ಮುಂಬೈಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೆ. ನನ್ನ ಪತಿ ಕೂಡಾ 2016ರಲ್ಲಿ ಕೆಲಸ ಬಿಟ್ಟಿದ್ದರು. ಯಾಕೆ ಬಿಟ್ಟಿದ್ದರು ಎಂಬುದ ಗೊತ್ತಿಲ್ಲ. ಪತಿ ಹೆಸರಿನಲ್ಲಿ ಗುರೂಜಿ ಆಸ್ತಿ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಮಗೂ ಗುರೂಜಿಗೂ ಯಾವುದೇ ಗಲಾಟೆ ಇರಲಿಲ್ಲ. ಅಪಾರ್ಟ್ ಮೆಂಟ್ ನನ್ನ ಹೆಸರಲ್ಲಿದೆ ಎನ್ನುವುದು ಸುಳ್ಳು. ಬ್ಯಾಂಕ್ ನಲ್ಲಿ ಸಾಲ ಮಾಡಿ ಪ್ಲ್ಯಾಟ್ ಖರೀದಿ ಮಾಡಿದ್ದೇವೆ ಎಂದರು.
ನಾಲ್ಕೈದು ದಿನಗಳಿಂದ ಮನೆಗೇ ಕಾಲಿಟ್ಟಿರಲಿಲ್ಲ ಗುರೂಜಿ ಹತ್ಯೆ ಅರೋಪಿ ಮಹಾಂತೇಶ
ನಾಲ್ಕೈದು ದಿನಗಳಿಂದ ಪತಿ ಮನೆಗೆ ಬಂದಿರಲಿಲ್ಲ. ಕರೆ ಮಾಡಿ ವಿಚಾರಿಸಿದಾಗ, ಕೆಲಸದಲ್ಲಿದ್ದೇನೆ ಎನ್ನುತ್ತಿದ್ದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿ ಮಹಾಂತೇಶನ ಪತ್ನಿ ವನಜಾಕ್ಷಿ ಇನ್ನಷ್ಟು ಮಾಹಿತಿ ಬಿಚ್ಚಿಟ್ಟರು.
ನನಗೆ ಮಂಗಳವಾರ ಬೆಳಿಗ್ಗೆ ಟಿ.ವಿ.ಯಲ್ಲಿ ನೋಡಿದಾಗಲೇ ಅವರು ಸ್ವಾಮೀಜಿ ಅವರನ್ನು ಕೊಲೆ ಮಾಡಿರುವ ವಿಷಯ ಗೊತ್ತಾಯಿತು. ನಂತರ, ವಿದ್ಯಾನಗರ ಠಾಣೆ ಪೊಲೀಸರು ವಿಚಾರಣೆಗೆ ಕರೆದಾಗ ಹೋಗಿ ನನಗೆ ಗೊತ್ತಿದ್ದನ್ನು ಹೇಳಿದ್ದೇನೆ. ಗುರೂಜಿ ಒಳ್ಳೆಯ ಸ್ವಭಾವದವರು, ನನ್ನ ಪತಿ ಅವರನ್ನು ಹತ್ಯೆ ಮಾಡಿ ತಪ್ಪು ಮಾಡಿದರು ಎಂದು ಪುನರುಚ್ಚರಿಸಿದರು.