ಕುಂದಗೋಳ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ, ಮಾರ್ಗ ಮಧ್ಯೆ 108 ಆಂಬ್ಯುಲೆನ್ಸ್ನಲ್ಲಿಯೇ ಹೆರಿಗೆಯಾದ ಘಟನೆ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಗುಡೇನಕಟ್ಟೆ ಗ್ರಾಮದ ಆಫ್ರಿನ್ ದಾದಾಪೀರ ಅಜಮಕಾನವರ ಅವರಿಗೆ ಬುಧವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು 108 ಕ್ಕೆ ಕರೆ ಮಾಡಿದಾಗ ಅಲ್ಪ ಸಮಯದಲ್ಲಿಯೇ ಆಂಬ್ಯುಲೆನ್ಸ್ ಮನೆಗೆ ಬಂದಿದೆ. ನಂತರ ಗರ್ಭಿಣಿಯನ್ನು ಕರೆದುಕೊಂಡು ಹೋಗುವಾಗ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದುದನ್ನು ನೋಡಿದ ಆಂಬ್ಯುಲೆನ್ಸ್ ಸಿಬ್ಬಂದಿ ಅಶೋಕ ಪೂಜಾರ ಮತ್ತು ಬಸವರಾಜ ರಾಥೋಡ ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು.
ಆಫ್ರಿನ್ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಲೂಕಾಸ್ಪತ್ರೆಗೆ ಸೇರಿಸಲಾಗಿದೆ. 108 ಸಿಬ್ಬಂದಿ ಬಸವರಾಜ ರಾಥೋಡ ಹಾಗೂ ಅಶೋಕ ಪೂಜಾರಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.