ದಾವಣಗೆರೆ: ಧಾರವಾಡ-ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ರೈಲ್ವೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಪ್ರಾಪ್ತ ವಯಸ್ಕರನ್ನು ಚಿತ್ರದುರ್ಗದ ವೀಕ್ಷಣಾ ಗೃಹದಲ್ಲಿ ಇರಿಸಲಾಗಿದೆ ಎಂದು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕರು ಎಸ್.ಎಸ್.ನಗರ ಮತ್ತು ಬಾಷಾ ನಗರದ ನಿವಾಸಿಗಳಾಗಿದ್ದಾರೆ. ಜುಲೈ 1ರಂದು ಈ ಘಟನೆ ನಡೆದಿದೆ. ಹುಡುಗರು ಕಲ್ಲು ತೂರಾಟ ನಡೆಸಿದ ನಂತರ ರೈಲಿನ ಕಿಟಕಿ ಗಾಜು ಬಿರುಕು ಬಿಟ್ಟಿತ್ತು.
ಎರಡನೇ ವಂದೇ ಭಾರತ್ ರೈಲಿನ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 26 ರಂದು ಹಸಿರು ನಿಶಾನೆ ತೋರಿದ್ದರು. ಈ ಘಟನೆಯು ಪ್ರಯಾಣಿಕರು ಮತ್ತು ಅಧಿಕಾರಿಗಳಲ್ಲಿ ಕಳವಳವನ್ನುಂಟು ಮಾಡಿತ್ತು. ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.