ಧಾರವಾಡ: ಅಂತರ್ ಧರ್ಮೀಯ ವಿವಾಹವಾಗಿದ್ದ ಇಬ್ಬರು ಪ್ರೇಮಿಗಳನ್ನು ರಾಜಕೀಯ ಒತ್ತಡಕ್ಕೆ ಮಣಿದು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬೇರ್ಪಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಕುರಿತು ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರು ನಗರದ ಗ್ರಾಮೀಣ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ ಮತ್ತು ಅದೇ ಗ್ರಾಮದ ಅನ್ಯ ಧರ್ಮೀಯ ಯುವತಿ (ಹೆಸರು ಬದಲಾವಣೆ ಮಾಡಲಾಗಿದೆ ಉಮಾ) ಪರಸ್ಪರ ಪ್ರೀತಿಸಿದ್ದರು. ಮದುವೆ ಸಹ ಆಗಿ. ಪರಸ್ಪರ ಒಪ್ಪಿ ಇತ್ತೀಚೆಗೆ ರಿಜಿಸ್ಟರ್ ಮ್ಯಾರೇಜ್ ಸಹ ಆಗಿದ್ದಾರೆ. ಆದರೆ ಮದುವೆಯಾದ ಬಳಿಕ ಹುಡುಗಿ ತಾಯಿ ಮನೆಯವರು ಹುಡುಗನ ವಿರುದ್ಧ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ.
ತಾನು ಇಷ್ಟವಿದ್ದೇ ಮದುವೆಯಾಗಿದ್ದಾಗಿ ಹುಡುಗಿ ಹೇಳಿದಾಗಲೂ ಪೊಲೀಸರು ಯಾರದೋ ಮಾತು ಕೇಳಿ ಈಗ ಹುಡುಗಿಯನ್ನು ಸಾಂತ್ವನ ಕೇಂದ್ರಕ್ಕೆ ಹಾಕಿ ಹುಡುಗನನ್ನು ವಶಕ್ಕೆ ಪಡೆದುಕೊಂಡು ಹಲ್ಲೆ ನಡೆಸಿದ್ದಾರೆ. ಈಗಲೂ ಸಹ ಹುಡುಗಿ ನನ್ನ ಜೊತೆ ಬರಲು ಒಪ್ಪಿಗೆ ಇದ್ದರೂ ಪೊಲೀಸರು ಬೇರ್ಪಡಿಸುತ್ತಿದ್ದಾರೆ ಅಂತಾ ಪ್ರೀತಿಸಿ ಮದುವೆಯಾದ ಯುವಕ ಮಂಜುನಾಥ ಆರೋಪ ಮಾಡಿದ್ದಾರೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಎದುರು ಹೋರಾಟ ಮಾಡುತ್ತಿರುವ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಹುಡುಗಿಯನ್ನು ಹುಡುಗನ ಜೊತೆ ಕಳುಹಿಸಿ ಎಂದು ಒತ್ತಾಯಿಸಿದ್ದಾರೆ. ರಾಜಕೀಯ ಹಸ್ತಕ್ಷೇಪದಿಂದ ಪೊಲೀಸರು ಹುಡುಗ ಹುಡುಗಿ ಬೇರ್ಪಡಿಸಿ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಈ ವಿಷಯ ಎಲ್ಲಿಗೆ ಬಂದು ತಲುಪುತ್ತೋ ಎಂಬುದನ್ನು ಕಾಯ್ದು ನೋಡಬೇಕಾಗಿದೆ.