ಹುಬ್ಬಳ್ಳಿ: ಮಠಾಧೀಶರು ರಾಜಕೀಯಕ್ಕೆ ಬರಲು ಇಲ್ಲಿನ ಪರಿಸ್ಥಿತಿ ಕೂಡಾ ಹೊಂದಾಣಿಕೆ ಆಗಬೇಕು. ಮಠಾಧೀಶರು ಯಾರು ದೊಡ್ಡ ಸಂಖ್ಯೆಯಲ್ಲಿ ಬಂದಿಲ್ಲ. ದೇಶದಲ್ಲಿ ಯೋಗಿ ಆದಿತ್ಯನಾಥ, ಉಮಾ ಭಾರತಿ ಅಂತವರನ್ನು ಬಿಟ್ಟರೆ ಯಾರೂ ಬಂದಿಲ್ಲ. ಮಠಾಧೀಶರು ರಾಜಕಾರಣಕ್ಕೆ ಬರೋದು, ಬಿಡೋದು ಅವರ ವೈಯಕ್ತಿಕ ವಿಚಾರ. ಆದರೆ ರಾಜ್ಯದಲ್ಲಿ ಆ ತರಹದ ವಾತಾವರಣವಿಲ್ಲ. ಇದನ್ನು ಜನರು ಕೂಡಾ ಒಪ್ಪುವುದಿಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಗರದಲ್ಲಿಂದು ಮಠಾಧೀಶರು ರಾಜಕಾರಣಕ್ಕೆ ಬರುವ ವಿಚಾರವಾಗಿ ಮಾತನಾಡಿದ ಅವರು, ಇನ್ನು ರಾಜಕಾರಣಕ್ಕೆ ಬಂದ ಮೇಲೆ ರಾಜಕೀಯ ಪಕ್ಷಗಳನ್ನು ಟೀಕೆ ಮಾಡಬೇಕಾಗುತ್ತದೆ. ಸ್ವಾಮಿಗಳಿಗೆ ಸಮಸ್ಯೆ ಉದ್ಭವಿಸುತ್ತವೆ. ಅಲ್ಲದೇ ಯಾವುದೇ ಒಂದು ಜಾತಿಗೆ ಮಠಾಧೀಶರು ಸೀಮಿತ ಆಗಲು ಆಗುವುದಿಲ್ಲ. ಮಠಾಧೀಶರು ಎಂದರೆ ಕಾವಿ ಬಟ್ಟೆ ಹಾಕಿಕೊಂಡ ಮೇಲೆ ಎಲ್ಲ ಜನರನ್ನು ಪ್ರೀತಿ ಮಾಡಬೇಕು, ಸಮಾನವಾಗಿ ಕಾಣಬೇಕು. ಹೀಗಾಗಿ ಈ ಕಾರಣದಿಂದ ರಾಜಕೀಯಕ್ಕೆ ಸೂಕ್ತ ಆಗುವ ವ್ಯಕ್ತಿಗಳು ಬರಬೇಕು ಹೊರತು ಎಲ್ಲರೂ ಬರೋಕ್ಕೆ ಸಾಧ್ಯ ಆಗುವುದಿಲ್ಲ ಎಂದು ಹೇಳಿದರು.
ಯಾವ ಮಠಾಧೀಶರಿಗೆ ರಾಜಕೀಯಕ್ಕೆ ಬರಲು ಆಸಕ್ತಿ ಇದೆ. ಅವರು ಯೋಗಿ ಆದಿತ್ಯನಾಥ, ಉಮಾ ಭಾರತಿ ಅಂತವರ ರೀತಿಯಲ್ಲಿ ಧೈರ್ಯವಾಗಿ ರಾಜಕಾರಣದಲ್ಲಿ ನಿಲ್ಲುವ ಅಭಿಲಾಷೆಯಿಂದ ರಾಜಕಾರಣಕ್ಕೆ ಬರಲು ಪ್ರಯತ್ನ ಮಾಡಬಹುದು. ಅದು ರಾಜಕೀಯ ಪಕ್ಷಗಳ ಮೇಲೆ ಅವಲಂಬನೆ ಆಗಿರುತ್ತದೆ. ಆ ದೃಷ್ಟಿಯಿಂದ ಮಠಾಧೀಶರು ನಮ್ಮನ್ನು ಸಂಪರ್ಕ ಮಾಡಿಲ್ಲ. ಬರೋದು ಬಿಡೋದು ಅವರ ವೈಯಕ್ತಿಕ ವಿಚಾರಕ್ಕೆ ಬಿಟ್ಟದ್ದು ಎಂದರು.
ಈಗಾಗಲೇ ಮಠಾಧೀಶರು ರಾಜಕೀಯಕ್ಕೆ ಬರುವ ವಿಚಾರವಾಗಿ ಪರ, ವಿರೋಧವಾಗಿ ಬಹಳಷ್ಟು ಜನರು ಮಾತನಾಡಿದ್ದಾರೆ. ನಾನು ಅವರ ಪರವಾಗಿ ಇಲ್ಲ. ವಿರೋಧವಾಗಿಲ್ಲ ಎಂದರು.