ಹುಬ್ಬಳ್ಳಿ: ಮಹದಾಯಿ ಯೋಜನೆ ವಿಚಾರದಲ್ಲಿ ಸತತವಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಲೇ, ಎಚ್ಚರಿಕೆ ನೀಡುತ್ತಲೇ ಬಂದಾಗ, ಭಾರತೀಯ ಜನತಾ ಪಕ್ಷದ ನಾಯಕರು ರಾಜಕೀಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನು ಮಾಡಬೇಕಾಗಿತ್ತು ಅವರು ಮಾಡಲಿಲ್ಲ. ಕೇವಲ ಸುಳ್ಳು ಹೇಳುವುದಲ್ಲಿಯೇ ಕಾಲಹರಣ ಮಾಡಿದರೆಂದು ಮಾಜಿ ಜಲಸಂಪನ್ಮೂಲ ಸಚಿವ ಎಚ್. ಕೆ. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ಜನಾಂದೋಲನವಾಗಿ ಹೋರಾಟ ಮಾಡಿ, ಅನೇಕ ಪ್ರಶ್ನೆಗಳನ್ನು ಹಾಕಿದೆವು. ಆದರೆ ಯಾವುದೇ ಉತ್ತರ ಅವರಿಂದ ಬರಲೇ ಇಲ್ಲ. ಇನ್ನು ಈ ವಿಚಾರದಲ್ಲಿ ಸದನದಲ್ಲಿ ಒಂದು ಮಹದಾಯಿ ಯೋಜನೆ ಜಾರಿಯಲ್ಲಿ ಡಿಪಿಆರ್ ಗೆ ಅನುಮತಿ ಸಿಕ್ಕಿದೆ ಎಂದು ಸುಳ್ಳು ಆದೇಶ ಪ್ರತಿ ಹೊರಡಿಸಿ ಅದನ್ನು ಸಮರ್ಥಿಸುವ ಕೆಲಸಕ್ಕೆ ಮುಂದಾದರು. ಇದನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸಿ ಹೋರಾಟಕ್ಕೆ ಸಹ ಮುಂದಾಯಿತು.
ಅರಣ್ಯ ಇಲಾಖೆಯಿಂದ ಮಹದಾಯಿ ಹಾಗೂ ಬಂಡೂರಿಗೆ ಇನ್ನು ಅನುಮತಿ ಸಿಕ್ಕಿಲ್ಲ ಅಂತಾ ಹೇಳಿದರೂ ಕೂಡ ಅದಕ್ಕೆ ಕ್ಯಾರೇ ಅನ್ನದೇ ಭಾರತೀಯ ಜನತಾ ಪಕ್ಷದ ನಾಯಕರು ಹಾಗೂ ಸಚಿವರು ಕೇವಲ ಸುಳ್ಳು ಡಿಪಿಆರ್ ಅನುಮತಿ ಪತ್ರ ಬಹಿರಂಗವಾಗಿ ತೋರಿಸಿ ದೊಡ್ಡ ಮಟ್ಟದ ವಿಜಯೋತ್ಸವ ಸಹ ಮಾಡಿದರು.
ಆದರೆ ಅವರಿಗೆ ಈ ಬಗ್ಗೆ ಯಾವುದೇ ರೀತಿಯ ಗಂಭೀರತೆ ಇಲ್ಲ . ಅರಣ್ಯ ಇಲಾಖೆಯ ಭೂಮಿಯಲ್ಲಿನ ಯೋಜನೆ ಎಲ್ಲವೂ ಕ್ಲಿಯರ್ ಮಾಡಿ ಕೊಡಲು ಒತ್ತಾಯವನ್ನು ಬಿಜೆಪಿ ಮಾಡಲಿಲ್ಲ. ಕೇವಲ ತಮಗೆ ಬೇಕಾಬಿಟ್ಟಿಯಾಗಿ ನಡೆದುಕೊಂಡರು ಎಂದು ಅಸಮಾಧಾನ ವ್ಯಕ್ತಪಡಿಸಿದರು.