ಧಾರವಾಡ: ಪೊಲೀಸರಿಗೆ ವಿವಿಧ ಸೌಲಭ್ಯಗಳನ್ನು ಕೊಡುವಂತಹ ಅಂಶಗಳನ್ನು ಹೊಂದಿರುವ ರಾಘವೇಂದ್ರ ಔರಾದಕರ್ ವರದಿ ಜಾರಿಗೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದ ಪೊಲೀಸ್ ಹಕ್ಕುಗಳ ಹೋರಾಟಗಾರ ಬಸವರಾಜ ಕೊರವರ್ ಹಾಗೂ ಗುರುಪಾದಯ್ಯ ಹೊಂಗಲ್ ಮಠ ಅವರಿಗೆ ಹೈಕೋರ್ಟ್ ಸಿಹಿ ಸುದ್ದಿ ಕೊಟ್ಟಿದೆ.
ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಲಕ್ಷಾಂತರ ಪೊಲೀಸರಿಗೆ ವಾರದ ರಜೆ, ಸಂಬಳ ಹೆಚ್ಚಳ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೊಡುವಂತಹ ಅಂಶಗಳು ರಾಘವೇಂದ್ರ ಔರಾದಕರ್ ವರದಿಯಲ್ಲಿವೆ.
ರಾಜ್ಯ ಸರ್ಕಾರದ ರಾಜದ್ರೋಹ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರು ಹೈಕೋರ್ಟ್ ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಅರ್ಜಿದಾರರ ಪರ ದೀಪಕ ಶೆಟ್ಟಿ ವಾದಿಸಿದ್ದರು.
ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇವರ ಮೇಲೆ ರಾಜದ್ರೋಹದ ಪ್ರಕರಣ ದಾಖಲಿಸಿ 86 ದಿನಗಳ ಕಾಲ ಇವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಕೊನೆಗೂ ಸರಕಾರದ ವಿರುದ್ದ ಜೈಲಿನಲ್ಲಿಯೇ ಹಲವು ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಕೈಗೊಂಡು ಸರಕಾರಕ್ಕೆ ಸೆಡ್ಡು ಹೊಡೆದಿದ್ದರು. ಕೊನೆಗೆ ಮನವೊಲಿಕೆ ನಂತರ ಹೋರಾಟ ಮೊಟಕುಗೊಳಿಸಿದ್ದರು.
ಇದಾದ 86 ದಿನಗಳ ಬಳಿಕ ಜಾಮೀನು ಮೇಲೆ ಹೊರಬಂದಿದ್ದರು. ಎಂಟು ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟದ ನಂತರ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದ ಆದೇಶದ ವಿರುದ್ದ ಹೈಕೋರ್ಟ್ ಮೊರೆ ಹೋಗಿದ್ದರು. ಈಗ ರಾಜ್ಯ ಸರ್ಕಾರದ ರಾಜದ್ರೋಹ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ.