ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದ ವೃದ್ಧ ದಂಪತಿಗಳು 52 ವರ್ಷದ ಹಿಂದೆ ಡೈವರ್ಸ್ ತೆಗೆದುಕೊಂಡಿದ್ದರು. ನ್ಯಾಯಾಲಯದ ಆದೇಶದಂತೆ ಪತಿ ಬಸಪ್ಪ ಅಗಡಿ ಪ್ರತಿ ತಿಂಗಳು ಕಲ್ಲವ್ವಳಿಗೆ ಜೀವನಾಂಶ ನೀಡುತ್ತಿದ್ದ. ಆದ್ರೆ ಕೆಲ ತಿಂಗಳಿನಿಂದ ಜೀವನಾಂಶ ಕೊಡುವಲ್ಲಿ ಬಸಪ್ಪ ವಿಫಲವಾಗಿದ್ದ. ಈ ಹಿನ್ನೆಲೆಯಲ್ಲಿ ಕಲ್ಲವ್ವ ನ್ಯಾಯಾಲಯದ ಮೊರೆ ಹೋಗಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸ್ಥಳೀಯ ಹಿರಿಯ ದಿವಾನಿ ನ್ಯಾಯಲಯ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ತೀರ್ಮಾನಿಸಿತ್ತು.
ಇಂತಹ ವೃದ್ಧ ದಂಪತಿಗಳನ್ನು ನ್ಯಾಯಾಲಯ ಒಂದು ಮಾಡಿದೆ. 85 ರ ಇಳಿ ವಯಸ್ಸಿನಲ್ಲಿ ಈ ಜೋಡಿ ಒಂದಾಗಿ ಮನೆಯತ್ತ ಹೆಜ್ಜೆ ಹಾಕಿದೆ. ಯೌವ್ವನದಲ್ಲಿ ದೂರವಾಗಿದ್ರು, ವೃದ್ಧಾಪ್ಯದಲ್ಲಿ ಒಂದಾದ್ರು. ಅದೂ ಸಹ ರಾಜೀ ಪಂಚಾಯ್ತಿ ಮೂಲಕ. 52 ವರ್ಷ ದೂರ ಇದ್ದ ದಂಪತಿಗಳನ್ನು ಒಂದು ಮಾಡಿದ ಲೋಕ್ ಅದಾಲತ್. ಇಂಥದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾದದ್ದು ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ನಡೆದ ಲೋಕ್ ಅದಾಲತ್ . ಹೀಗೆ ವೃದ್ಧಾಪ್ಯದಲ್ಲಿ ಒಂದಾದ ದಂಪತಿಗಳನ್ನು ಬಸಪ್ಪ ಅಗಡಿ(85) ಹಾಗೂ ಕಲ್ಲವ್ವ ಅಗಡಿ (80) ಎಂದು ಗುರುತಿಸಲಾಗಿದೆ.
ಜೀವನಾಂಶ ಕೊಡುವಲ್ಲಿ ವಿಫಲವಾದ ಬಸಪ್ಪ ಅಗಡಿಯನ್ನೂ ನ್ಯಾಯಾಧೀಶರು ಕರೆಯಿಸಿದ್ದರು. ಹಣ್ಣು ಹಣ್ಣು ಮುದುಕರಾದ ಸ್ಥಿತಿಯಲ್ಲಿದ್ದ ದಂಪತಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿರೋದನ್ನು ನೋಡಿ ನ್ಯಾಯಾಧೀಶರಿಗೂ ಅಚ್ಚರಿಯಾಗಿದೆ. ರಾಜೀ ಪಂಚಾಯ್ತಿ ಮೂಲಕ ನ್ಯಾಯಾಧೀಶರು ವೃದ್ಧ ದಂಪತಿಗಳನ್ನು ಒಂದು ಮಾಡಿದ್ದಾರೆ. ನ್ಯಾಯಧೀಶರಾದ ಜಿ ಆರ್ ಶೆಟ್ಟರ ಅವರಿಂದ ರಾಜೀ ಸಂಧಾನ ನಡೆಯಿತು. ಗಂಡ ಹೆಂಡತಿ ಇಬ್ಬರನ್ನೂ ಪರಸ್ಪರ ಒಂದುಗೂಡಿಸುವಲ್ಲಿ ಯಶಸ್ವಿಯಾಗಿದೆ. ವಕೀಲರಾದ ಜಿ ಆರ್ ಗಾಣಗೇರಿಂದ ವಕಾಲತ್ತು ವಹಿಸಿದ್ದರು.