ಧಾರವಾಡ: ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ವಿವಿಧ ಸಾಂಸ್ಕ್ರತಿಕ ಕಲಾ ತಂಡಗಳೊಂದಿಗೆ ನಗರದಲ್ಲಿ ಸಂಚರಿಸಿ, ಮತದಾನ ಜಾಗೃತಿ ಮೂಡಿಸಲಾಯಿತು.
ಮತದಾನ ಜಾಗೃತಿ ಸಾಂಸ್ಕ್ರತಿಕ ಕಲಾ ಜಾಥಾಗೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ. ಕೆ. ಅವರು ಮಾತನಾಡಿ, ಮತದಾನ ಪವಿತ್ರವಾದ ಹಕ್ಕು, ಅರ್ಹ ಪ್ರತಿ ಮತದಾರ ಮೇ.10 ರಂದು ತಪ್ಪದೇ ಮತದಾನ ಮಾಡಬೇಕು. ಜಿಲ್ಲಾ ಸ್ವೀಪ್ ಸಮಿತಿಯಿಂದ ವಿವಿಧ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಮತದಾನ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ವಯೋವೃದ್ಧ ಮತದಾರರಿಗೆ, ವಿಶೇಷಚೇತನ ಮತದಾರರಿಗೆ ದೈಹಿಕ ತೊಂದರೆಯಿಂದ ಮತದಾನಕ್ಕೆ ಅಡಚಣೆ ಆಗಬಾರದೆಂದು ಮನೆಯಿಂದಲೇ ಮತದಾನ ಮಾಡಲು ಭಾರತ ಚುನಾವಣಾ ಆಯೋಗ ಅವಕಾಶ ಮಾಡಿದೆ. ಅದರಂತೆ ಜಿಲ್ಲಾ ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಿ.ಎಸ್. ಮುಗನೂರಮಠ, ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕೆ.ಎಂ.ಶೇಖ, ಮಂಜುನಾಥ ಯಡಳ್ಳಿ, ಗಿರೀಶ ಚೌಡಕಿ, ಲಕ್ಷಣ ರಜಪೂತ, ಜಂಟಿ ಕಾರ್ಯದರ್ಶಿ ಡಾ.ಸುರೇಶ ಹಿರೇಮಠ, ಮಂಜುನಾಥ ಚೌರಡ್ಡಿ, ಸೇರಿದಂತೆ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.