ಧಾರವಾಡ: ಧಾರವಾಡದ ಕಡಪಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಈ ಸಮಾವೇಶಕ್ಕೆ 10 ಜನ ಟಿಕೆಟ್ ಆಕಾಂಕ್ಷಿಗಳು ತಮ್ಮ ಶಕ್ತಿ ಪ್ರದರ್ಶನಕ್ಕೋಸ್ಕರ ಸಾವಿರಾರು ಜನರನ್ನು ಕರೆತಂದಿದ್ದರು. ಸಿದ್ದರಾಮಯ್ಯ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಜನ ಸಿದ್ದರಾಮಯ್ಯ ಅವರ ಪರ ಘೋಷಣೆಗಳನ್ನು ಕೂಗಿದರು.
ಈ ವೇಳೆ ಜನ ಟಿಕೆಟ್ ಆಕಾಂಕ್ಷಿಗಳ ಪರ ಬೋರ್ಡ್ ಹಿಡಿದು ಘೋಷಣೆ ಹಾಕುತ್ತಿದುದನ್ನು ಕಂಡು ಸಿಟ್ಟಿಗೆದ್ದ ಸಿದ್ದರಾಮಯ್ಯ, ತಾವೇ ಮೈಕ್ನತ್ತ ಧಾವಿಸಿ ಯಾರಾರು ಬೋರ್ಡ್ ಹಿಡಿದಿದ್ದೀರೋ ಅವುಗಳನ್ನು ಕೆಳಗಿಳಿಸಿ. ನೀವು ಬೋರ್ಡ್ ಹಿಡಿದು ಘೋಷಣೆ ಹಾಕಿದರೆ ಅವರಿಗೆ ಟಿಕೆಟ್ ಕೊಟ್ಟು ಬಿಡುತ್ತೇವಾ? ಬೋರ್ಡ್ಗಳನ್ನು ಕೆಳಗಿಳಿಸಿ. ಯಾರಾರು ಬೋರ್ಡು ಹಿಡಿದಿದ್ದೀರೋ ಆಯಾ ಆಕಾಂಕ್ಷಿಗಳ ಹೆಸರನ್ನು ನಾನು ನೋಟ್ ಮಾಡಿಕೊಳ್ಳುತ್ತೇನೆ ಎಂದು ಗದರಿಸಿದ ಪ್ರಸಂಗ ನಡೆಯಿತು.
ಮಾಜಿ ಸಿಎಂ ಭಾಷಣ ಕೇಳದೇ ಖುರ್ಚಿ ಖಾಲಿ ಮಾಡಿ ಹೊರಟ ಜನ:
ಸಿದ್ದರಾಮಯ್ಯನವರ ಭಾಷಣ ಆರಂಭವಾಗುತ್ತಿದ್ದಂತೆ ತಮ್ಮ ಖುರ್ಚಿ ಖಾಲಿ ಮಾಡಿ ಮನೆಯತ್ತ ಹೊರಟ ದೃಶ್ಯ ಕಂಡು ಬಂತು.
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ 10 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಮ್ಮ ಶಕ್ತಿ ಪ್ರದರ್ಶನಕ್ಕೋಸ್ಕರ ಜನರನ್ನು ಸಮಾವೇಶಕ್ಕೆ ಕರೆ ತಂದಿದ್ದರು. ಮೊದಲು ಕಡಪಾ ಮೈದಾನದ ತುಂಬ ಜನತೆ ಕಿಕ್ಕಿರಿದು ತುಂಬಿತ್ತು. ಆದರೆ, ಸಿದ್ದರಾಮಯ್ಯನವರ ಭಾಷಣ ಆರಂಭವಾಗುತ್ತಿದ್ದಂತೆ ಮಹಿಳೆಯರು ತಮ್ಮ ಖುರ್ಚಿಗಳನ್ನು ಖಾಲಿ ಮಾಡಿ ಮನೆಯತ್ತ ಹೋಗುತ್ತಿದ್ದ ದೃಶ್ಯ ಕಂಡು ಬಂತು.