ಧಾರವಾಡ: ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆ ಅವರು ಇಂದು ಅಧಿಕೃತವಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಧಾರವಾಡದ ಕೆಸಿಡಿ ವೃತ್ತದ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಚಿಂಚೋರೆ, ಅಲ್ಲಿಂದ ತೆರೆದ ವಾಹನದ ಮೂಲಕ ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಧಾರವಾಡದ ಪಾಲಿಕೆ ಕಚೇರಿಗೆ ಬಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಗಣಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡದವರು ಪಾಲ್ಗೊಂಡಿದರು. ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡು ದೀಪಕ್ ಚಿಂಚೋರೆ ಅವರಿಗೆ ಜಯಘೋಷ ಮೊಳಗಿಸಿದರು. ದೀಪಕ್ ಚಿಂಚೋರೆ ಅವರ ಸ್ಪರ್ಧೆಯಿಂದ ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರ ತೀವ್ರ ರಂಗು ಪಡೆದುಕೊಂಡಿದೆ. ತೆರೆದ ವಾಹನದ ಮೂಲಕ ನಡೆದ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಆರ್.ಕೆ.ಪಾಟೀಲ, ಹೇಮಂತ ಗುರ್ಲಹೊಸೂರ ಅವರು ಚಿಂಚೋರೆ ಅವರಿಗೆ ಸಾಥ್ ನೀಡಿದರು. ಒಟ್ಟಾರೆ ಚಿಂಚೋರೆ ಕೂಡ ಶಕ್ತಿ ಪ್ರದರ್ಶನದೊಂದಿಗೆ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.