ಧಾರವಾಡ: ಇಂದಿನಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಕೃಷಿ ಮೇಳದ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ರಿಬ್ಬನ್ ಕಟ್ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೃಷಿ ಸಚಿವ ಚೆಲುವರಾಯಸ್ವಾಮಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ ಸಾಥ್ ನೀಡಿದರು.
ಅಲ್ಲಿಂದ ನೇರವಾಗಿ ಒಳಗಡೆ ಬಂದ ಸಿಎಂ ಸಿದ್ದರಾಮಯ್ಯ, ಬೌನ್ಸಾಯ್ ಸಸಿ, ವಿವಿಧ ಸಸ್ಯ ತಳಿ, ವಿವಿಧ ಹೂವುಗಳನ್ನು ವೀಕ್ಷಿಸಿದರು. ಕಲ್ಲಂಗಡಿ ಹಣ್ಣಿನಲ್ಲಿ ರಚಿಸಲಾದ ಕಲಾಕೃತಿಗಳನ್ನು ಸಿದ್ದರಾಮಯ್ಯ ತದೇಕಚಿತ್ತದಿಂದ ವೀಕ್ಷಿಸಿ ಖುಷಿಪಟ್ಟರು. ಸಿಎಂ ಸಿದ್ದರಾಮಯ್ಯ ಕೃಷಿ ಮೇಳದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ, ಅಲ್ಲಿಂದ ನೇರವಾಗಿ ಕೃಷಿ ಮೇಳದ ಮುಖ್ಯ ವೇದಿಕೆಯತ್ತ ತೆರಳಿದರು.