ಹುಬ್ಬಳ್ಳಿ : ಪೂರಿ-ಬಾಜಿಯಲ್ಲಿ ಹಲ್ಲಿ ಬಿದ್ದ ಪ್ರಕರಣ ಸಂಬಂಧ ಗ್ರಾಹಕರಿಗೆ 90 ಸಾವಿರ ರೂ. ಪರಿಹಾರ ನೀಡುವಂತೆ ಧಾರವಾಡ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
2018ರ ಸೆಪ್ಟೆಂಬರ್ 26ರಂದು ವಿನಾಯಕ ಮತ್ತು ಸಹನಾ ದಂಪತಿ ಬೆಳಗಿನ ಉಪಹಾರಕ್ಕಾಗಿ ಹುಬ್ಬಳ್ಳಿಯ ವರೂರಿನ ಕಾಮತ್ ಉಪಚಾರ ಹೋಟೆಲ್ಗೆ ತೆರಳಿದ್ದರು. ಈ ವೇಳೆ ಪೂರಿ-ಬಾಜಿ ನೀಡುವಂತೆ ಹೇಳಿದ್ದರು. ಆರ್ಡರ್ ಬಂದ ಬಳಿಕ ಪೂರಿ-ಬಾಜಿಯಲ್ಲಿ ಬೆಂದ ಹಲ್ಲಿ ಇರುವುದನ್ನು ಗಮನಿಸಿದ್ದರು. ಬಳಿಕ ಈ ಬಗ್ಗೆ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದು, ಅವರು ನಿರ್ಲಕ್ಷ್ಯ ಧೋರಣೆ ತಾಳಿದ್ದರು.
ನಂತರ ವಿಷಪೂರಿತ ಉಪಹಾರ ಸೇವಿಸಿದ್ದ ಗ್ರಾಹಕ ವಿನಾಯಕ ಅವರಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿತ್ತು. ಶಿಗ್ಗಾಂವ ಹಾಗೂ ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಜೊತೆಗೆ ಈ ಕುರಿತು ಧಾರವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಆಯೋಗ, ಕಾಮತ್ ಉಪಚಾರ ಹೊಟೇಲ್ನವರಿಂದ ಗ್ರಾಹಕರಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆರೋಪಿಸಿದೆ.
ಜೊತೆಗೆ ಇಬ್ಬರೂ ಗ್ರಾಹಕರಿಗೆ ಒಟ್ಟು 90 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ಪಿ.ಸಿ.ಹಿರೇಮಠ ಮತ್ತು ವಿ.ಎ. ಬೋಳಶೆಟ್ಟಿ ಅವರು ತೀರ್ಪು ನೀಡಿದ್ದಾರೆ.