ಹುಬ್ಬಳ್ಳಿ : ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಿದ ನಂತರವೂ ಕೆಲವರು ಹೋರಾಟಕ್ಕೆ ಮುಂದಾಗಿರುವುದು ಸರಿಯಲ್ಲ. ತೀರ್ಪು ಬಗ್ಗೆ ಆಕ್ಷೇಪವಿದ್ದರೆ ಕಾನೂನು ಹೋರಾಟ ಮುಂದುವರೆಸಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್ ತೀರ್ಪು ನಂತರ ಪ್ರತಿಭಟನೆ ಮಾಡುವುದು ಒಳ್ಳೆ ಬೆಳವಣಿಗೆ ಅಲ್ಲ. ಇದು ನ್ಯಾಯಂಗ ನಿಂದನೆಯೂ ಆಗಲಿದೆ ಎಂದರು.
ಹಿಜಾಬ್ ವಿಷಯದಲ್ಲಿ ಎರಡು ಕಡೆ ವಾದ ಆಲಿಸಿ ಹೈಕೋರ್ಟ್ ತೀರ್ಪು ನೀಡಿದೆ. ಅದನ್ನು ಎಲ್ಲರು ಪಾಲಿಸಬೇಕು, ಆಕ್ಷೇಪ ಇದ್ದರೆ ಮೇಲ್ಮನವಿ ಸಲ್ಲಿಸಬೇಕು. ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ. ಈ ಹಂತದಲ್ಲಿ ಬಂದ್ ಮಾಡುವುದು, ಹೋರಾಟ ನ್ಯಾಯಾಂಗದ ಒತ್ತಡ ತರುವ ಯತ್ನವಾಗಲಿದೆ ಎಂದರು.
ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಎಲ್ಲರು ಒಪ್ಪಿ ಸೌಹಾರ್ದಯುತವಾಗಿ ನಡೆದುಕೊಂಡಿಲ್ಲವೇ ಎಂದು ಪ್ರಶ್ನಿಸಿದರು.
ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವುದು ಒಳ್ಳೆಯದೆ. ಗುಜರಾತ್ ಸರಕಾರ ಭಗವದ್ಗೀತೆ ವಿಚಾರದಲ್ಲಿ ಏನು ನಿರ್ಣಯ ತೆಗೆದುಕೊಂಡಿದೆಯೋ ಹೆಚ್ಚಿನ ಮಾಹಿತಿ ಇಲ್ಲ ಎಂದರು.
ರಾಷ್ಟ್ರಧ್ವಜ ಧ್ವಜವನ್ನು ಪಾಲಿಸ್ಟರ್ ಬಟ್ಟೆಯಿಂದಲೂ ತಯಾರಿಸಬಹುದು ಎಂಬ ಕೇಂದ್ರ ಸರಕಾರದ ಕ್ರಮ ಖಾದಿ ಕ್ಷೇತ್ರಕ್ಕೆ ಧಕ್ಕೆಯಾದರೆ ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ಈ ಕುರಿತು ಸಂಸದರ ಜತೆಗೂ ಚರ್ಚಿಸುವುದಾಗಿ ಶೆಟ್ಟರ ತಿಳಿಸಿದರು.
ವಿಜಯೇಂದ್ರ ಅವರು ತಮ್ಮ ನಿವಾಸಕ್ಕೆ ಆಗಮಿಸಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಬೇರೆ ಪಕ್ಷದವರು ನನ್ನನ್ನು ಭೇಟಿಯಾಗಿಲ್ಲ. ಧಾರ್ಮಿಕ ಕಾರ್ಯಕ್ರಮಕ್ಕೆಂದು ಇಲ್ಲಿಗೆ ಆಗಮಿಸಿದ್ದ ವಿಜಯೇಂದ್ರ ಅವರು, ಸೌಹಾರ್ದಯುತವಾಗಿ ಭೇಟಿಯಾಗಿದ್ದರಷ್ಟೇ ಎಂದರು.
ರಾಜ್ಯ ಸರಕಾರದಲ್ಲಿ ದೊಡ್ಡ ಬದಲಾವಣೆ ಆಗಲಿದೆಯಂತೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ನನಗೇನು ಗೊತ್ತಿಲ್ಲ ನಿಮಗೇನಾದರು ಮಾಹಿತಿ ಇದ್ದರೆ ತಿಳಿಸಿ ಎಂದರು.