ಹುಬ್ಬಳ್ಳಿ: ರಾಜ್ಯದಲ್ಲಿ ನಾಳೆಯಿಂದ 9 ಮತ್ತು 10ನೇ ತರಗತಿ ಪ್ರೌಢಶಾಲೆ ತರಗತಿಗಳನ್ನು ಆರಂಭಿಸುತ್ತಿದ್ದೇವೆ,ಪ್ರೌಢಶಾಲೆ ತರಗತಿಗಳು ಹೇಗೆ ನಡೆಯುತ್ತವೆ ಎಂದು ನೋಡಿಕೊಂಡು ಮುಂದೆ ಕಾಲೇಜುಗಳನ್ನು ಆರಂಭಿಸುತ್ತೇವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ತಮ್ಮ ಶಿಗ್ಗಾಂವ್ ಕ್ಷೇತ್ರಕ್ಕೆ ತೆರಳಲಿರುವ ಅವರು ಅದಕ್ಕೂ ಮೊದಲು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಮ್ಮ ಅಧಿಕಾರಿಗಳು ಶಾಲೆಗಳ ಸುತ್ತಮುತ್ತ ತೀವ್ರ ಎಚ್ಚರಿಕೆ ವಹಿಸಲಿದ್ದಾರೆ.ಈಗಾಗಲೇ ಶಾಲಾ ಆಡಳಿತ ಮಂಡಳಿ, ಜಿಲ್ಲಾಧಿಕಾರಿಗಳಿಗೆ ಶಾಂತಿ ಸಭೆಗಳನ್ನು ನಡೆಸಲು ಸೂಚಿಸಿದ್ದೇನೆ ಎಂದರು.
ಶಾಂತಿಯುತವಾಗಿ ತರಗತಿಗಳು ಆರಂಭವಾಗಿ ನಿರಾತಂಕವಾಗಿ ಸಾಗುವುದು ಮೊದಲಿನಂತೆ ಸೌಹಾರ್ದಯುತವಾಗಿ ವಿದ್ಯಾರ್ಥಿಗಳು ಶಾಲೆಗಳಿಗೆ ಬಂದು ಹೋಗುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಶಾಲೆಗಳು ಶಾಂತಿಯುತವಾಗಿ ಮೊದಲಿನಂತೆ ನಡೆಯುವುದು ನಮ್ಮ ಆದ್ಯತೆಯಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ, ಬಹಿರಂಗವಾಗಿ ಯಾರು ಕೂಡ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡದಂತೆ ನೋಡಿಕೊಳ್ಳುವಂತೆ ಹೇಳಿದ್ದೇನೆ ಎಂದರು.
ಹೈಕೋರ್ಟ್ ಸೂಚನೆ ಮೇರೆಗೆ ತರಗತಿಗಳು ಆರಂಭವಾಗುತ್ತಿದೆ. ಸರ್ಕಾರ 9 ಹಾಗು 10ನೇ ತರಗತಿ ಆರಂಭಕ್ಕೆ ಸೂಚನೆ ನೀಡಿದೆ. ಶಾಲೆಗಳಿಗೆ ಹಿಜಾಬ್-ಕೇಸರಿ ಶಾಲಿಗೆ ಅನುಮತಿ ಇಲ್ಲ , ಸಮವಸ್ತ್ರದಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳುವಂತೆ ಸೂಚಿಸಿದೆ. ಫೆಬ್ರವರಿ 15ರಿಂದ ಪದವಿ ಕಾಲೇಜುಗಳ ತರಗತಿ ಆರಂಭಕ್ಕೆ ನಿರ್ಧಾರ ಮಾಡಿದೆ. ಸರ್ಕಾರವು ಶಾಲೆಆವರಣದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರ ನೀಡಿದ್ದು , ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲು ಸೂಚನೆ ನೀಡಿದೆ.