ಧಾರವಾಡ : ಜಿಲ್ಲೆಯ ನುಗ್ಗಿಕೇರಿಯ ಹನುಮ ದೇವಾಲಯದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗೆ ಸೇರಿದ ಕಲ್ಲಂಗಡಿ ಅಂಗಡಿ ಧ್ವಂಸಗೊಳಿಸಿದ ಆರೋಪದ ಮೇರೆಗೆ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಮುಸ್ಲಿಂ ವ್ಯಾಪಾರಿ ನಬಿಸಾಬ್ ಕಿಲ್ಲೆದಾರ್ ಸಲ್ಲಿಸಿದ ದೂರಿನ ಆಧಾರದ ಮೇಲೆ ವಿಡಿಯೋ ದೃಶ್ಯಾವಳಿ ಪರಿಶೀಲಿಸಿದ ಧಾರವಾಡ ಗ್ರಾಮಾಂತರ ಪೊಲೀಸರು ಆರೋಪಿಗಳಾದ ಮೈಲಾರಪ್ಪ ಗುಡ್ಡಪ್ಪನವರ್ (27) ಮಹಾಲಿಂಗ್ ಹೈಗಳಿ (26) ಚಿದಾನಂದ ಕಲಾಲ್ ಮತ್ತು ಕುಮಾರ್ ಕಟ್ಟಿಮನಿ (26) ಎಂಬುವರನ್ನು ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.ಇವರೆಲ್ಲರೂ ಧಾರವಾಡದ ನಿವಾಸಿಗಳಾಗಿದ್ದಾರೆ.
10 ಮಂದಿ ಆರೋಪಿಗಳ ವಿರುದ್ಧ ಎಫ್ ಐಆರ್ ಸಲ್ಲಿಸಲಾಗಿದೆ. ಘಟನೆ ಬಗ್ಗೆ ಇಂಟರ್ ನೆಟ್ ನಲ್ಲಿ ದೊರೆತ ವಿಡಿಯೋ ದೃಶ್ಯಾವಳಿ ಮೂಲಕ ಕೆಲವು ಜನರಿಗೆ ಸಮನ್ಸ್ ನೀಡಿದ್ದೇವೆ. ವಿಚಾರಣೆಗಾಗಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ಸೌಹಾರ್ದತೆ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ದೇಶದಲ್ಲಿ ನಾವೆಲ್ಲರೂ ಒಟ್ಟಾಗಿ ಬದುಕಬೇಕಾಗಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕಿಲ್ಲ, ಇಂತಹ ಕೃತ್ಯಗಳಲ್ಲಿ ತೊಡಗುವವರನ್ನು ಸರ್ಕಾರ ರಕ್ಷಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.