ಹುಬ್ಬಳ್ಳಿ : ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಹತ್ಯೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ ಪತಿಯೇ ಅಪರಾಧಿ ಎಂದು ಇಲ್ಲಿನ ಒಂದನೇ ಸೆಷನ್ ಕೋರ್ಟ್ನಲ್ಲಿ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣ ಪ್ರಕಟಗೊಳಿಸಲು ಮಾರ್ಚ್ 31ಕ್ಕೆ ಕಾಯ್ದಿರಿಸಲಾಗಿದೆ.
ಗದಗ ರಸ್ತೆಯ ಚಾಲುಕ್ಯ ನಗರ ನಿವಾಸಿ ಕಿಶೋರ ಬೊಮ್ಮಾಜಿ ಅಪರಾಧಿ. 2018ರ ಮಾರ್ಚ್ 23ರಂದು ಪತ್ನಿ ಲವಿನಾ ಅವರನ್ನು ಹತ್ಯೆ ಮಾಡಿ, ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದ. ಆದರೆ, ಕೇಶ್ವಾಪುರ ಠಾಣೆಯಲ್ಲಿ ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿರುವ ಕುರಿತು ಪ್ರಕರಣ ದಾಖಲಾಗಿತ್ತು.
ಪ್ರಕರಣದ ಹಿನ್ನೆಲೆ: ಆಂಧ್ರಪ್ರದೇಶದ ಗುಂಟೂರಿನ ಲವಿನಾ ಅವರನ್ನು 2011ರಲ್ಲಿ ಕಿಶೋರ ಮದುವೆಯಾಗಿದ್ದ. ಕೆಲವು ದಿನಗಳ ನಂತರ ಆತನ ತಂದೆ-ತಾಯಿ, ಲವಿನಾ ಶೀಲದ ಬಗ್ಗೆ ಸಂಶಯ ಪಡುತ್ತ ಕಿರುಕುಳ ನೀಡಲು ಆರಂಭಿಸಿದ್ದರು. ಅದರಿಂದ ಬೇಸತ್ತ ಲವಿನಾ, ಪತಿಯೊಂದಿಗೆ ಚಾಲುಕ್ಯ ನಗರದ ಬೇರೊಂದು ಮನೆ ಮಾಡಿ ವಾಸಿಸುತ್ತಿದ್ದರು. ಅಲ್ಲಿಯೂ ಪತಿ ಕಿರುಕುಳ ಮುಂದುವರಿಸಿದ್ದರಿಂದ, ಹೆತ್ತವರು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಅಲ್ಲಿಂದ ಹುಬ್ಬಳ್ಳಿಗೆ ಕರೆದುಕೊಂಡು ಬಂದು, ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದ.
ಹೆತ್ತವರೊಂದಿಗೆ ಮಾತನಾಡಲೆಂದು ಓಣಿಯ ವ್ಯಕ್ತಿಯೊಬ್ಬರು ಅವರಿಗೆ ಮೊಬೈಲ್ ಕೊಡಿಸಿದ್ದರು. ಮೊಬೈಲ್ನಲ್ಲಿ ಆ ವ್ಯಕ್ತಿಗೆ ಕರೆ ಮಾಡಿರುವುದು ತಿಳಿದು ಕೋಪಗೊಂಡ ಕಿಶೋರ, ಕಸಬರಿಗೆಯ ಸ್ಟೀಲ್ ಹ್ಯಾಂಡ್ನಿಂದ ಹಲ್ಲೆ ನಡೆಸಿ, ತಲೆಗೂದಲು ಕತ್ತರಿಸಿದ್ದ. ನೀರು ಕಾಯಿಸುವ ಹೀಟರ್ ವೈಯರ್ನಿಂದ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ವೇಲ್ನಿಂದ ಮನೆಯ ಜಂತಿಗೆ ಮೃತದೇಹ ನೇತು ಹಾಕಿ, ನಂತರ ವೇಲ್ ಕತ್ತರಿಸಿ ಕಿಮ್ಸ್ಗೆ ಸಾಗಿಸಿದ್ದ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹಾಗೂ ಮೃತ ದೇಹದ ಮೇಲಿನ ಗುರುತಿನಿಂದಾಗಿ ಪೊಲೀಸರು ಕೊಲೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ವಿಚಾರಣೆ ಪೂರ್ಣಗೊಳಿಸಿದ್ದು, ಸರ್ಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.
ಜೀವಾವಧಿ ಶಿಕ್ಷೆ: ಗುರಾಯಿಸಿದ್ದಾನೆ ಎನ್ನುವ ಕಾರಣಕ್ಕೆ ಎನ್.ಎ. ನಗರದ ಶಾಬುದ್ದೀನ್ ಬಿಕ್ಕನಬಾಯಿ(21) ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪರಾಧಿಗಳಿಗೆ ಇಲ್ಲಿನ 5ನೇ ಸೆಷನ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿ, ₹1.50 ಲಕ್ಷ ದಂಡ ವಿಧಿಸಿದೆ.
ಸದರಸೊಫಾದ ಸಂಶುದ್ದೀನ್ ಸವಣೂರು ಮತ್ತು ಪಠಾಣಗಲ್ಲಿಯ ಜುಬೇರ್ ಕಲಬುರ್ಗಿ ಅಪರಾಧಿಗಳು. 2020ರ ಮಾ. 10ರಂದು ಕಟಕರ ಒಣಿಯ ಸರ್ಕಾರಿ ಉರ್ದು ಶಾಲೆ ಬಳಿ ಸಂಶುದ್ದೀನ್ ಮತ್ತು ಜುಬೇರ್ ಕುಳಿತಿದ್ದಾಗ, ಶಾಬುದ್ದೀನ್ ಅವರನ್ನು ಗುರಾಯಿಸಿದ್ದ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, ಶಾಬುದ್ದೀನ್ ಕೈಕಡಗದಿಂದ ಹಲ್ಲೆ ನಡೆಸಲು ಮುಂದಾಗಿದ್ದ. ಸಾರ್ವಜನಿಕರು ಜಗಳ ಬಿಡಿಸಿದ್ದರು. ಅದೇ ದ್ವೇಷದ ಹಿನ್ನೆಲೆಯಲ್ಲಿ ಮಾರನೇ ದಿನ ಇಬ್ಬರು ಅಪರಾಧಿಗಳು, ಶಾಬುದ್ದೀನ್ನನ್ನು ಪಠಾಣಗಲ್ಲಿ ವೃತ್ತದಲ್ಲಿ ತಡೆದು, ಬಡಿಗೆ ಹಾಗೂ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು.
ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಶಾಮರಾಜ ಸಜ್ಜನ್ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ನ್ಯಾಯಾಧೀಶ ಗಂಗಾಧರ ಕೆ.ಎನ್. ಅವರು ಸೋಮವಾರ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದ್ದರು.