ಹುಬ್ಬಳ್ಳಿ: ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ನವರ ವಿರೋಧ ಮಾಡುವುದು ಸಾಮಾನ್ಯ. ಆದರೆ ಎಲ್ಲರ ಅಪೇಕ್ಷೆ ಕಾಯ್ದೆ ಜಾರಿಗೆ ತರಬೇಕು ಎಂಬುದಾಗಿದ್ದು, ಅಧಿವೇಶನದಲ್ಲಿ ಕಾನೂನು ತರಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೇರೆ ರಾಜ್ಯಗಳಲ್ಲಿ ಕಾಯ್ದೆ ಜಾರಿಗೊಳಿಸಿದ್ದಾರೆ ಅದರಂತೆ ಇಲ್ಲಿ ತರಲಾಗುತ್ತದೆ ಎಂದರು.
ಮತಾಂತರ ನಿಷೇಧ ಕಾಯ್ದೆಗೆ ನೀವು ಏನಾದರೂ ಸಲಹೆ ನೀಡಿದ್ದಿರಾ ಎಂಬ ಪ್ರಶ್ನೇಗೆ ನನ್ನ ಒಬ್ಬನ ಅಭಿಪ್ರಾಯ ಅಷ್ಟೇ ಅಲ್ಲ ರಾಜ್ಯ ಆಡಳಿತದ ಎಲ್ಲ ಸಚಿವರು, ಶಾಸಕರು, ಸಂಸದರ ಆಶೆಯ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವುದಾಗಿದೆ ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಸಂಪೂರ್ಣ ಬಿಜೆಪಿ ವರಿಷ್ಠರ ಬೆಂಬಲವಿದೆ. ಅನುಮಾನವೆ ಬೇಡಾ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ವಿಪ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳನ್ನು ನೂರಕ್ಕೆ ನೂರು ಗೆಲ್ಲುತ್ತೇವೆ. ಬಹುಮತ ಪಡೆಯುತ್ತೇವೆ ಎಂಬ ವಿಶ್ವಾಸವಿದೆ. ಜನರು ಆಶಿರ್ವಾದ ಮಾಡುತ್ತಾರೆ ಎಂದು ತಿಳಿಸಿದರು.
ಅಧಿವೇಶನದಲ್ಲಿ ಅನೇಕ ಸಮಸ್ಯೆ, ಯೋಜನೆಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತವೆ. ಅದಕ್ಕೆ ಅರಿಯಾದ ಉತ್ತರ ಮತ್ತು ತೀರ್ಮಾನ ತೆಗೆದುಕೊಳ್ಳಲು ತಯಾರಿದ್ದೇವೆ ಎಂದು ಹೇಳಿದರು.