ಬೆಳಗಾವಿ: ನಾನು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು ನಿಜ. ಆದರೆ ನಾನು ಜೆಡಿಎಸ್ ಸೇರುತ್ತೇನೆ ಎಂಬ ಊಹಾಪೋಹಗಳಲ್ಲಿ ಯಾವುದೇ ಹುರುಳಿಲ್ಲ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೋಳಿ ಹೇಳಿದ್ದಾರೆ.
ನಗರದಲ್ಲಿ ನ.19ರ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಕಾಂಗ್ರೆಸ್ ನಲ್ಲಿ ಸಚಿವರಾಗಿದ್ದರೂ ಅದನ್ನು ತೊರೆದು ಬಿಜೆಪಿ ಸೇರಿ ಸರ್ಕಾರ ರಚಿಸಿದ್ದಾಗಿ ತಿಳಿಸಿದರು. ಈಗ ನಾನು ಯಾರ ಬಳಿಯೂ ಹೋಗಿ ನನ್ನನ್ನು ಮತ್ತೆ ಮಂತ್ರಿಯನ್ನಾಗಿ ಮಾಡುವಂತೆ ವಿನಂತಿಸಿಕೊಂಡಿಲ್ಲ. ಅಂತಹ ಯಾವುದೇ ಬೇಡಿಕೆ ಇಲ್ಲ ಎಂದು ಅವರು ಹೇಳಿದರು.
“ಬಿಜೆಪಿ ನಾಯಕರು ನನ್ನನ್ನು ಸಚಿವರನ್ನಾಗಿ ಮಾಡಲಿ ಬಿಡಲಿ, ನಾನು ಪಕ್ಷವನ್ನು ತೊರೆಯುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ೨೦೨೩ ರ ಚುನಾವಣೆಯ ಸಾಲಿನಲ್ಲಿ ಪಕ್ಷವು ನನಗೆ ಪ್ರಮುಖ ಜವಾಬ್ದಾರಿಯನ್ನು ನೀಡಲಿದೆ. ನಾನು ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ” ಎಂದು ಅವರು ಹೇಳಿದರು.